ಮೈಸೂರು: ಅರಣ್ಯ ಇಲಾಖೆಯ ನಗರದ ಪ್ರಾದೇಶಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಸಮುದಾಯ ಮತ್ತು ಕುರುಬ ಸಮುದಾಯಕ್ಕೆ ಸೇರಿದ ಹಲವರನ್ನು ಇಲಾಖೆ ಅಧಿಕಾರಿಗಳು ವಿನಾಕಾರಣ ಕೆಲಸದಿಂದ ತೆಗೆದು ಹಾಕಿದ್ದಾರೆ. ಜತೆಗೆ ಇವರಿಗೆ ನೀಡಬೇಕಾಗಿದ್ದ ಸೌಲಭ್ಯಗಳಿಂದಲೂ ವಂಚಿಸಲಾಗಿದೆ. ಹೀಗಾಗಿ ಒಂದು ವಾರದೊಳಗೆ ನ್ಯಾಯ ದೊರಕಿಸಿಕೊಡದಿದ್ದರೆ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟಿಸಲಾಗುವುದು ಎಂದು ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವನ್ಣ ಎಚ್ಚರಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವರಾಜು, ನಾಗರಾಜು, ಸಣ್ಣಸ್ವಾಮಿ, ಕೆ.ಮಹದೇವಸ್ವಾಮಿ, ನಿಂಗರಾಜು, ಮಹದೇವಸ್ವಾಮಿ ಎಂಬುವವರೇ ಇಲಾಖೆ ಅಧಿಕಾರಿಗಳಿಂದ ಅನ್ಯಾಯಕ್ಕೆ ಒಳಗಾದವರಾಗಿದ್ದಾರೆ. ಇವರನ್ನು ೨೦೧೪ರ ನಿಯಮದಂತೆ ಸಕ್ರಮಗೊಳಿಸದೇ ವಂಚಿಸಲಾಗಿದೆ. ಇಎಸ್ಐ, ಪಿಎಫ್ ನೀಡಿಲ್ಲ. ಇದನ್ನು ಪ್ರಶ್ನಿಸಿದ ಕಾರಣ ಕೆಲಸದಿಂದ ತೆಗೆದು ಹಾಕಲಾಗಿದೆ. ಇವರು ಕಾಡು ಕಾಯುವ, ರಾತ್ರಿ ಗಸ್ತಿನಲ್ಲಿಯೂ ಕೆಲಸ ಮಾಡಿದವರಾಗಿದ್ದಾರೆ. ವಿವಿಧ ಕ್ಯಾಂಪ್ಗಳಲ್ಲಿ ದಿನದ ೨೪ ಗಂಟೆಯೂ ದುಡಿದಿದ್ದಾರೆ. ಇವರಿಗೆ ನಿಯಮದಂತೆ ನೀಡಬೇಕಾದ ರಕ್ಷಣಾ ಸಾಮಗ್ರಿಯನ್ನೂ ನೀಡದೇ ವಂಚಿಸಲಾಗಿದೆ. ಅಂತಿಮವಾಗಿ ಕೆಲಸದಿಂದಲೇ ತೆಗೆಯಲಾಗಿದೆ ಎಂದು ಕಿಡಿ ಕಾರಿದರು.
ಹೀಗಾಗಿ ಇವರು ತಮ್ಮ ಸಂಘಟನೆ ಮೊರೆ ಹೋಗಿದ್ದು, ಸಂಬಂಧಿತ ಅಧಿಕಾರಿಗಳು ಇವರಿಗೆ ಬರಬೇಕಾದ ಹಣ ನೀಡಬೇಕು. ಕೆಲಸಕ್ಕೆ ಮತ್ತೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದೆಂದರು.
ಗೋಷ್ಠಿಯಲ್ಲಿ ಶಿವಮೂರ್ತಿ, ಕಿರಂಗೂರು ಸ್ವಾಮಿ, ದೇವರಾಜು, ಬಸವರಾಜು, ನಿಂಗರಾಜು, ಇನ್ನಿತರರು ಹಾಜರಿದ್ದರು.