ಮೈಸೂರು: ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ನಾಡಿನ ಅಧಿದೇವತೆಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಅದಕ್ಕಾಗಿ ವಿವಿಧ ಕಾರ್ಯ ಕೈಗೊಳ್ಳಲಾಗಿದೆ.
ಈ ಸಲ ಜೂ. ೨೩, ೩೦, ಜುಲೈ ೭ ಹಾಗೂ ೧೪ರಂದು ಆಷಾಢ ಶುಕ್ರವಾರ ಬರಲಿದ್ದು, ಈ ನಡುವೆ ಜು. ೧೦ರಂದು ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ಜರುಗಲಿದೆ.
ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಪ್ರತಿ ಶುಕ್ರವಾರ ವಿಶೇಷ ಪೂಜೋತ್ಸವ ಜರುಗಲಿದ್ದು, ಅದಕ್ಕಾಗಿ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಆದ್ದರಿಂದ ಯಾವುದೇ ಸಮಸ್ಯೆ ಆಗದಂತೆ ತಯಾರಿ ನಡೆದಿದೆ.
ಮಹಿಳೆಯರಿಗೆ ಪ್ರತ್ಯೇಕ ಸಾಲಿನಲ್ಲಿ ದರ್ಶನ, ಭಕ್ತರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಾಸೋಹದಲ್ಲಿ ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ತುರ್ತುಪರಿಸ್ಥಿತಿ ನಿರ್ವಹಿಸಲು ಬೆಟ್ಟದಲ್ಲಿ ಸದಾ ಪೊಲೀಸ್ ವಾಹನ, ಆಂಬುಲೆನ್ಸ್ ಸನ್ನದ್ಧವಾಗಿ ಇರಲಿವೆ.
ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಪೊಲೀಸ್, ಆರೋಗ್ಯ, ಲೋಕೋಪಯೋಗಿ, ಸಾರಿಗೆ, ಅರಣ್ಯ ಇಲಾಖೆಗಳು, ಅಗ್ನಿಶಾಮಕ ದಳ, ಸೆಸ್ಕ್, ಮೈಸೂರು ತಾಲೂಕು ಪಂಚಾಯಿತಿ ತಮಗೆ ವಹಿಸಿರುವ ಕೆಲಸಗಳನ್ನು ಕೈಗೊಂಡಿವೆ.
ಮೆಟ್ಟಿಲು ಮೂಲಕ ತೆರಳುವವರಿಗೆ ಸೂಕ್ತ ವ್ಯವಸ್ಥೆ, ಮೆಟ್ಟಿಲು ಮಾರ್ಗದಲ್ಲಿ ಬೀದಿ ದೀಪ ಅಳವಡಿಕೆ ಮಾಡಲಾಗಿದೆ. ಸಿಸಿ ಟಿವಿ ಕ್ಯಾಮರಾ ಅಳವಡಿಸಿ ಕಣ್ಗಾವಲು ಇಡಲಾಗಿದೆ. ಹೆಚ್ಚುವರಿಯಾಗಿ ಶೌಚಗೃಹ ವ್ಯವಸ್ಥೆ ಮಾಡಲಾಗುತ್ತಿದೆ.
ಆಷಾಢ ಶುಕ್ರವಾರ ಮತ್ತು ವರ್ಧಂತಿ ದಿವಸ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಲಲಿತಮಹಲ್ ಹೆಲಿಪ್ಯಾಡ್ ಬಳಿ ನಿರ್ಮಿಸಲಾಗಿರುವ ತಾತ್ಕಾಲಿಕ ನಿಲ್ದಾಣದಿಂದ ಬೆಟ್ಟಕ್ಕೆ ಉಚಿತವಾಗಿ ಬಸ್ ವ್ಯವಸ್ಥೆ ಇರಲಿದೆ. ಮುಂಜಾನೆ ೩ರಿಂದ ರಾತ್ರಿ ೧೦ರವರೆಗೂ ಬಸ್ ಸಂಚಾರವಿರುತ್ತದೆ.