ಮೈಸೂರು: ನಗರದ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲು ಮುಂದಾಗಿರುವ ಪಾಲಿಕೆ ಕ್ರಮ ಖಂಡಿಸಿ ಭಾರತ ಕಮ್ಯುನಿಷ್ಟ್ ಪಕ್ಷ (ಸಿಪಿಐಎಂ) ವತಿಯಿಂದ ನಗರಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಪ್ರಮುಖ ಪ್ರವಾಸಿ ಕೇಂದ್ರವಾಗಿದ್ದು, ದಿನನಿತ್ಯ ಸಾವಿರಾರು ಮಂದಿ ನಗರಕ್ಕೆ ಭೇಟಿ ನೀಡುತ್ತಾರೆ. ಸಾವಿರಾರು ಮಂದಿ ಪ್ರವಾಸಿಗರನ್ನು ನಂಬಿ ಜೀವನ ಕಟ್ಟಿಕೊಂಡಿದ್ದಾರೆ. ಗ್ರಾಮಾಂತರ ಭಾಗದಿಂದ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ನಗರಕ್ಕೆ ಬರುತ್ತಾರೆ. ಅವರೆಲ್ಲಾ ಶುಲ್ಕ ವಿಧಿಸಿ ತಮ್ಮ ವಾಹನಗಳನ್ನು ನಿಲ್ಲಿಸಲು ಆಗುವುದಿಲ್ಲ. ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಪೇ ಅಂಡ್ ಪಾರ್ಕ್ ಜಾರಿಗೊಳಿಸಲು ನಿರ್ಣಯ ಕೈಗೊಂಡಿರುವುದು ಅವೈಜ್ಞಾನಿಕ. ಇದರಿಂದ ಜನರಿಗೆ ಹೊರೆಯಾಗಲಿದೆ. ಗುತ್ತಿಗೆ ಪಡೆಯುವ ಖಾಸಗಿ ವ್ಯಕ್ತಿಗೆ ಸುಲಿಗೆ ಮಾಡಲು ಅವಕಾಶ ನೀಡಿದಂತಾಗುತ್ತದೆ. ಜತೆಗೆ ವಾಹನ ಸವಾರರ ಶೋಷಣೆ ಮಾಡಲು ದಾರಿ ಮಾಡಿಕೊಡುತ್ತದೆ ಎಂದು ಕಿಡಿ ಕಾರಿದರು.
ನಗರಲ್ಲಿ ವಾಹನಗಳನ್ನು ನಿಲ್ಲಿಸಲು ಸರಿಯಾದ ಜಾಗವೇ ಇಲ್ಲ. ಪುರಭವನದಲ್ಲಿ ನಡೆಯುತ್ತಿರುವ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಪ್ರತಿನಿತ್ಯ ಒಂದಲ್ಲಾ ಒಂದು ರಸ್ತೆಯಲ್ಲಿ ಕಾಮಗಾರಿಗಳು ನಡೆಯುತ್ತಿರುತ್ತವೆ. ಹೀಗಿರುವಾಗಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಮುಂದಾಗಿರುವುದು ಸರಿಯಲ್ಲ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಈ ಪೇ ಅಂಡ್ ಪಾರ್ಕಿಂಗ್ ಮತ್ತಷ್ಟು ಹೊರೆಯಾಗಲಿದೆ. ಹೀಗಾಗಿ ಕೂಡಲೇ ನಿರ್ಣಯವನ್ನು ವಾಪಸ್ ಪಡೆಯಬೇಕು. ವಾಹನ ಸವಾರರಿಗೆ ತಮ್ಮ ವಾಹನಗಳನ್ನು ನಿಲ್ಲಿಸಲು ಸಮರ್ಪಕ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಕೆ.ಬಸವರಾಜ್, ಲ.ಜಗನ್ನಾಥ್, ಜಿ.ಜಯರಾಂ, ಬಿ.ಎಂ.ಶಿವಣ್ಣ, ಸದಸ್ಯರಾದ ಸುಬ್ರಹ್ಮಣ್ಯ, ಕೃಷ್ಣಮೂರ್ತಿ, ಬಲರಾಂ, ಪುಟ್ಟಮಲ್ಲಯ್ಯ, ಸುರೇಶ್, ಆನಂದ್ ನಾಯಕ್, ಮೂರ್ತಿ, ಪಿ.ಪಿ.ಪ್ರಶಾಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು.