ಯಳಂದೂರು: ಸಮೀಪದ ಸಂಕಮರಹಳ್ಳಿ ಹೋಬಳಿಯ ಹೊಮ್ಮ ಗ್ರಾಮದ ಪ್ರಗತಿಪರ ರೈಕ್ಷ ಬಿ ಮಹದೇವಸ್ವಾಮಿ ರವರಿಗೆ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ನೀಡುವ ರಾಜ್ಯ ಮಟ್ಟದ ಫಲ ಶ್ರೇಷ್ಟ ತೋಟಗಾರಿಕಾ ರೈತ ಪ್ರಶಸ್ತಿಯನ್ನು ನೀಡಲಾಯಿತು.
ಈಚೆಗೆ ಬಾಗಲಕೋಟೆಯ ಕೋವಿನ ಉದ್ಯನಗಿರಿಯಲ್ಲಿ ನಡೆದ ತೋಟಗಾರಿಕಾ ಮೇಳದಲ್ಲಿ ಈ ಪ್ರಶಸ್ತಿಯನ್ನು ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ. ಭಾಂಡಗೆ ನೀಡಿದರು. ರಾಜ್ಯಾದ್ಯಂತ ೮ ಜಿಲ್ಲೆಯ ರೈತರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಇದರಲ್ಲಿ ಚಾಮರಾಜನಗರ ಜಿಲ್ಲೆಯಿಂದ ಇವರನ್ನು ಆಯ್ಕೆ ಮಾಡಲಾಗಿತ್ತು. ಇವರು ತಮ್ಮ ತೋಟದಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿ ವ್ಯವಸಾಯ ಮಾಡುತ್ತಿದ್ದಾರೆ.
ತಮ್ಮ ತಂದೆಯಿಂದ ಬಂದ ಜಮೀನೂ ಸೇರಿದಂತೆ ಒಟ್ಟು ೮. ಎಕರೆಯಲ್ಲಿ ಇವರು ಕೃಷಿಯನ್ನು ಮಾಡುತ್ತಿದ್ದಾರೆ. ಗೂಳೀಪುರ ಗ್ರಾಮದ ಬಳಿ ಇವರ ತೋಟವಿದ್ದು ಇಲ್ಲಿ ನೀರಿನ ಅಭಾವ ಇದ್ದ ಕಾರಣ ಇದಕ್ಕೆ ಒಂದೂವರೆ ಕಿ.ಮಿ. ಪೈಪ್ ಲೈನ್ ಮೂಲಕ ನೀರನ್ನು ತಂದು ಕೃಷಿ ಹೊಂಡ ನಿರ್ಮಿಸಿ ಕೃಷಿ ಮಾಡುವ ಮೂಲಕ ಇವರು ಸಾಧನೆ ಮಾಡಿದ್ದಾರೆ.
ಕೃಷಿಯಲ್ಲಿ ಸಾಂಪ್ರದಾಯಿಕ ಪದ್ಧತಿಯೊಂದಿಗೆ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಕೇವಲ ಸಾವಯವ ಗೊಬ್ಬರ, ಡಿದೋಪಚಾರ ನೀಡಿ ತಮ್ಮ ತೋಟವನ್ನು ಅಭಿವೃದ್ಧಿ ಪಡಿಸಿದ್ದಾರೆ. ಸದಾ ಕ್ರೀಯಾಶೀಲತೆಯಿಂದ ಕೂಡಿರುವ ಇವರು ಕೃಷಿ ವಿಜ್ಞಾನದ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ತಮ್ಮ ಜಮೀನು ಕಪ್ಪುಮಣ್ಣಿನಿಂದ ಕೂಡಿದ್ದರೂ ಕೂಡ ಇಲ್ಲಿ ಅಪರೂಪದ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ.