ಮೈಸೂರು: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ೯ ವರ್ಷಗಳ ಸಾಧನೆಯನ್ನು ಪ್ರತಿಯೊಬ್ಬ ಮತದಾರನ ಮನೆಗೆ ಜೂ.೨೩ರಿಂದ ೨೯ರವರೆಗೆ ಮನೆ ಮನೆ ಸಂಪರ್ಕ ಅಭಿಯಾನದ ಮೂಲಕ ತಲುಪಿಸಬೇಕೆಂದು ಬಿಜೆಪಿ ನಗರಾಧ್ಯಕ್ಷರೂ ಆದ ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಬೂತ್ ಕಾರ್ಯಕರ್ತರು ಕರಪತ್ರಗಳನ್ನು ಮನೆಗಳಿಗೆ ತಲುಪಿಸುವ ಮೂಲಕ ಮೋದಿ ಅವರ ಸಾಧನೆ ತಿಳಿಸಬೇಕೆಂದು ಕರೆ ನೀಡಿದರು.
ರಾಜ್ಯ ಸರ್ಕಾರ ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡುವ ದೂರದೃಷ್ಟಿ ಇಲ್ಲದ ಕಾರಣ ಶೀಘ್ರದಲ್ಲಿ ಕಾಂಗ್ರೆಸ್ ಚುನಾವಣಾ ರಾಜಕೀಯ ಲಾಭದ ಉದ್ದೇಶಕ್ಕಾಗಿ ನಗರ ಪಾಲಿಕೆ ಚುನಾವಣೆ ನಡೆಸುತ್ತಾರೆ ಎಂದು ತಿಳಿಸಿದರು.
ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಯಾವ ರೀತಿ ಗುರುತಿಸಿ ಟಿಕೆಟ್ ನೀಡಿ ಶಾಸಕನಾಗಿ ಮಾಡಿದೆಯೋ ಅದೇ ರೀತಿ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ದೊರೆಯಲಿದೆ ಎಂದು ನುಡಿದರು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ೨೩ ಬಿಜೆಪಿ ಸದಸ್ಯರಿದ್ದಾರೆ. ೧೦ರಿಂದ ೧೨ ವಾರ್ಡ್ಗಳಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇವೆ. ಈ ವಾರ್ಡ್ಗಳ ಬಗ್ಗೆ ಹೆಚ್ಚು ಗಮನಹರಿಸಬೇಕು. ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಿಂದಲೇ ಪಾಲಿಕೆ ಅಧಿಕಾರ ಹಿಡಿಯಬೇಕು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತೆಗೆದುಕೊಳ್ಳುವ ಜನ ವಿರೋಧಿ ನೀತಿಯನ್ನು ಖಂಡಿಸಿ ಅವರ ಸುಳ್ಳು ಭರವಸೆಗಳನ್ನು ಜನರ ಬಳಿಗೆ ಕೊಂಡೊಯ್ದು ಅವರ ತಪ್ಪುಗಳನ್ನು ಜನ ಸಾಮಾನ್ಯರಿಗೆ ತಿಳಿಸಬೇಕಿದೆ. ಕಾಂಗ್ರೆಸ್ ಸರ್ಕಾರದ ೧೫ ದಿನಗಳ ಧೋರಣೆಯನ್ನು ಗಮನಿಸಿದರೆ ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ತಳ್ಳುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದೆನಿಸುತ್ತದೆ. ಅವರ ಸವಾಲನ್ನು ಸ್ವೀಕರಿಸಿ ಜನ ಸಾಮಾನ್ಯರ ಪರವಾಗಿ ಮಾಡುವ ಹೋರಾಟದಲ್ಲಿ ಜೈಲಿಗೆ ಹೋಗಲು ಅಂಜುವುದಿಲ್ಲ ಎಂಬ ಮನಃಸ್ಥಿತಿಯಲ್ಲಿ ನಿರಂತರ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮೈಸೂರು ವಿಭಾಗದ ಪ್ರಭಾರಿ ಮೈ.ವಿ.ರವಿಶಂಕರ್, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಥಾಮಸ್, ಮೈಸೂರು ನಗರ ಪ್ರಭಾರಿ ಹಿರೇಂದ್ರ ಷಹಾ, ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ, ಎಚ್.ಜಿ.ಗಿರಿಧರ್, ಉಪ ಮೇಯರ್ ಜಿ.ರೂಪ ಭಾಗವಹಿಸಿದ್ದರು.