ಕೆ.ಆರ್.ನಗರ: ಮರಗಿಡಗಳನ್ನು ಬೆಳೆಸುವುದರಿಂದ ಪರಿಸರವು ಉಳಿಯುವುದರ ಜತೆಗೆ ಜಾಗತೀಕ ತಾಪಮಾನ ಸಮತೋಲನಕ್ಕೆ ಬರಲಿದೆ ಆದ್ದರಿಂದ ಎಲ್ಲರೂ ಹೆಚ್ಚು ಮರಗಳನ್ನು ಬೆಳೆಸಲು ಮುಂದಾಗಬೇಕು ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಂಬತ್ತು ಗ್ರಹಗಳಲ್ಲಿ ಭೂಮಿಯನ್ನೇ ಅವಲಂಭಿಸಿರುವ ಮನುಷ್ಯ ಅದರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಆಗ ಪರಿಸರವು ಸಂರಕ್ಷಣೆಗೊಳ್ಳಲಿದೆ ಎಂದರು.
ಯೂರೋಪ್ ರಾಷ್ಟ್ರದ ಹಳ್ಳಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳದೆ ಅರಣ್ಯದಲ್ಲೇ ಮರಗಳ ಮೇಲೆ ಅಟ್ಟಣೆ ಮಾಡಿ ವಾಸ ಮಾಡುವುದರ ಜತೆಗೆ ಮರಗಳನ್ನು ಪೂಜಿಸುವ ಪ್ರವೃತ್ತಿಯನ್ನು ಹೊಂದಿದ್ದಾರೆ ಇದನ್ನು ಇಲ್ಲಿನ ಜನತೆ ಅರ್ಥ ಮಾಡಿಕೊಂಡು ಯಾವುದೇ ಕಾರಣಕ್ಕೂ ಅರಣ್ಯ ನಾಶ ಮಾಡಬಾರದು ಎಂದು ಮನವಿ ಮಾಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎನ್.ಪ್ರಸನ್ನ ಮಾತನಾಡಿ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತಿದೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸುವ ಬದಲು ಉತ್ಪಾದನೆ ಮಾಡುವುದನ್ನ ನಿಲ್ಲಿಸಬೇಕು ಆಗ ಇದಕ್ಕೆ ಶಾಶ್ವತ ಪರಿಹಾರ ಕಾಣಲು ಸಾಧ್ಯ ಎಂದರು.
ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಪದಾರ್ಥಗಳನ್ನು ಬಳಸುವ ಬದಲು ಅಡಕೆ ತಟ್ಟೆ ಮತ್ತು ಅಡಕೆ ಕಪ್ಗಳನ್ನು ಬಳಸಬೇಕು ಆಗ ರೈತರಿಗೆ ಅನುಕೂಲ ಕಲ್ಪಿಸಿದಂತೆ ಆಗಲಿದೆ ಈ ಬಗ್ಗೆ ಸರ್ಕಾರ ಮತ್ತು ಸಾರ್ವಜನಿಕರು ಗಮನಹರಿಸಬೇಕು ಎಂದು ಕೋರಿದರು.
ರೈತರು ಜಮೀನುಗಳಲ್ಲಿ ವಿವಿಧ ಮಾದರಿಯ ಗಿಡ ಬೆಳೆಸಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಹಾಯಧನ ನೀಡಲಾಗುತ್ತದೆ ಇದರ ಜತೆಗೆ ಅತ್ಯಂತ ಕಡಿಮೆ ದರದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಗಿಡಗಳನ್ನು ವಿತರಿಸಲಾಗುತ್ತದೆ ಇವುಗಳನ್ನು ರೈತ ಬಾಂಧವರು ಸದ್ಬಳಕೆ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಹೆಚ್ಚು ಗಿಡ ಮರ ಬೆಳೆಸುವ ಮೂಲಕ ಪರಿಸರ ಉಳಿಸುವುದರ ಜತೆಗೆ ತಾವು ಆರ್ಥಿಕವಾಗಿ ಸಬಲರಾಗಬೇಕು ಎಂದು ಮನವಿ ಮಾಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ಪುರಸಭೆ ಸದಸ್ಯ ಕೋಳಿಪ್ರಕಾಶ್, ರೈತ ಮುಖಂಡ ಗರುಡಗಂಭಸ್ವಾಮಿ, ಯುವ ರೈತ ವೇದಿಕೆ ಅಧ್ಯಕ್ಷ ರಾಂಪ್ರಸಾದ್, ಕಬ್ಬು ಬೆಳೆಗಾರರ ಸಂಘದ ಅಂಕನಹಳ್ಳಿತಿಮ್ಮಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಪಿ.ದಿವಾಕರ್, ಪದಾಧಿಕಾರಿಗಳಾದ ಎಲ್.ಪಿ.ರವಿಕುಮಾರ್, ಪುಟ್ಟೇಗೌಡ, ನಟರಾಜು, ಜಿತೇಂದ್ರ, ಮಹದೇವ್, ಮಲ್ಲೇಶ್ ಸೇರಿದಂತೆ ಹಲವು ಮಂದಿ ಹಾಜರಿದ್ದರು