ಮೈಸೂರು: ನಮ್ಮ ನಡುವೆ ಸಾಕಷ್ಟು ನಿವೃತ್ತ ವಿಷಯ ಪರಿಣಿತರಿದ್ದರೂ ಸಮರ್ಪಕ ಸದ್ಬಳಕೆ ನಡೆಯುತ್ತಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪೊ.ಎಸ್.ಎನ್.ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
ಮಾನಸ ಗಂಗೋತ್ರಿಯ ಪರಿಸರ ವಿಜ್ಞಾನ ಅಧ್ಯಯನ ವಿಭಾಗ ಹಾಗೂ ಎಂ.ಟೆಕ್ ಮೆಟೀರಿಯಲ್ಸ್ ಸೈನ್ಸ್ ಸಹಯೋಗದೊಂದಿಗೆ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಪ್ರೊ.ಎಸ್ ಶ್ರೀಕಂಠಸ್ವಾಮಿ ಅಭಿನಂದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರೊ.ಶ್ರೀಕಂಠಸ್ವಾಮಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯಲ್ಲಿ ಫೆಲೋಶಿಪ್ ಪಡೆದು ಸಾಕಷ್ಟು ವಿಜ್ಞಾನ ವಿಷಯದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದಾರೆ. ಇಂತಹ ಸಾಧನೆಯನ್ನು ರಾಜಕೀಯ ಲಾಭಿಯಿಂದ ಮಾಡಲು ಸಾಧವಿಲ್ಲ. ಇದಕ್ಕೆ ಸ್ವಂತ ಶ್ರಮಬೇಕು. ಇಂತಹ ಸಾಧನೆಯನ್ನು ಕೆಲವೇ ಮಂದಿ ಮಾತ್ರ ಮಾಡಿದ್ದಾರೆ. ನಿವೃತ್ತಿ ಎಂಬುದು ನಿಶ್ಚಿತ. ಆದರೆ, ಸಾವು ಅನಿಶ್ಚಿತ. ಕೆಲವು ಸಾಧಕರಿಗೆ ಯಾವುದೇ ರೀತಿಯ ನಿವೃತ್ತಿ ಎಂಬುದಿಲ್ಲ. ಅವರ ಸೇವೆ ನಿವೃತ್ತಿಯ ನಂತರವೂ ನಡೆಯಬೇಕು. ವಿಪರ್ಯಾಸವೆಂದರೆ ಇಂತಹ ಅನುಭವಿಗಳ ಸದ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ತೀರಾ ಅಪರೂಪ ಎಂದು ಹೇಳಿದರು.
ನಮ್ಮಲ್ಲಿ ವಿಷಯ ತಜ್ಞರಿಗೆ ಯಾವುದೇ ಕೊರತೆಯಿಲ್ಲ. ಶ್ರೀಕಂಠಸ್ವಾಮಯಂತಹ ನೂರಾರು ವಿದ್ವಾಂಸರು ನಿವೃತ್ತಿ ಬಳಿಕ, ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಬಯಕೆ ಇದ್ದರೂ ಬಳಕೆ ಮಾಡಿಕೊಳ್ಳಲು ಯಾರೂ ಮುಂದಾಗುವುದಿಲ್ಲ. ವಿಶ್ವ ಸಂತೋಷ ಸೂಚ್ಯಂಕದಲ್ಲಿ ಪಿನ್ಲ್ಯಾಂಡ್ ಅಗ್ರಸ್ಥಾನದಲ್ಲಿದೆ. ಇದು ಭಾರತದಂತಹ ದೇಶಗಳಿಗೂ ವಿಸ್ತರಿಸಬೇಕು. ಶ್ರೀಕಂಠಸ್ವಾಮಿಯವರ ನಿವೃತಿ ಬದುಕು ಸಮಾಜದ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಹಾರೈಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್.ಎಸ್.ರಾಮೇಗೌಡ ಮಾತನಾಡಿ, ಒಂದು ವಿಶ್ವವಿದ್ಯಾನಿಲಯದಲ್ಲಿ ಹತ್ತು ಹಲವಾರು ವರ್ಷಗಳ ಕಾಲ ಬೋಧನೆ ಮಾಡಿ ಅಪಾರ ಪಾಂಡಿತ್ಯವನ್ನು ಸಮಾಜಕ್ಕೆ ಧಾರೆ ಎರೆದಿದ್ದರೂ ಅಂತವರ ನಿವೃತ್ತಿಯನ್ನು ವಿಶ್ವವಿದ್ಯಾನಿಯ ಜವಾಬ್ದಾರಿ ಹೊತ್ತು ಮಾಡದಿರುವುದು ನಿಜಕ್ಕೂ ದುರಂತ. ಇನ್ನು ಮುಂದೆಯಾದರೂ ವಿವಿಗಳು ಇಂತಹ ಕೆಸಲಕ್ಕೆ ಮುಂದಾಗಲಿ ಎಂದರು.
ನಮ್ಮ ರಾಜ್ಯದಲ್ಲಿ ೩೦ ಸರ್ಕಾರಿ ಸೇರಿದಂತೆ ಹಲವಾರು ಖಾಸಗಿ ವಿಶ್ವವಿದ್ಯಾನಿಲಯಗಳಿವೆ. ಶ್ರೀಕಂಠಸ್ವಾಮಿ ಅವರು ನಿವೃತ್ತಿ ಬದುಕನ್ನು ಇಂತಹ ವಿವಿಗಳಲ್ಲಿ ಕಳೆಯಬೇಕು. ನಿವೃತ್ತಿ ಜೀವನದಲ್ಲಿ ಅವರ eನವನ್ನು ಬೇರೆ ಬೇರೆ ಸಂಸ್ಥೆಗಳಿಗೂ ಧಾರೆ ಎರೆಯುವುದಕ್ಕೆ ಮುಂದಾಗಬೇಕು. ಇಂದು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಕೊರತೆ ಸಾಕಷ್ಟಿದೆ. ಅದರಲ್ಲೂ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರ ವಿಷಯಗಳ ಮೇಲೆ ಹೆಚ್ಚು ಸಂಶೋಧನೆ ನಡೆಯಬೇಕಿದೆ ಎಂದು ಹೇಳಿದರು.
ಮೈಸೂರು ನಗರದಲ್ಲೇ ಪ್ರತಿನಿತ್ಯ ೫೦೦ ಟನ್ಗಳಷ್ಟು ಘನತ್ಯಾಜ್ಯ ಸಂಗ್ರಹವಾಗುತ್ತದೆ. ಆದರೆ, ನಿರ್ವಹಣೆ ಮತ್ತು ಮರುಬಳಕೆ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ. ಇದನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಗರ ಪಾಲಿಕೆ ಶ್ರೀಕಂಠಸ್ವಾಮಿಯಂತಹ ವಿಜ್ಞಾನಿಗಳನ್ನು ಬಳಕೆ ಮಾಡಿಕೊಂಡು ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಸಿ.ನಾಗಣ್ಣ, ಪ್ರೊ.ಎಸ್.ಆರ್.ನಿರಂಜನ್, ಎಂ.ಎಸ್.ಭಾರತಿ, ಡಾ.ರಾಜು, ಪ್ರೊ.ವೆಂಕಟರಮಣ ಹಾಗೂ ಇತರರು ಇದ್ದರು.