ಹುಣಸೂರು:ನಾಗರಹೊಳೆ ಉದ್ಯಾನವನದಂಚಿನ ಗ್ರಾಮಗಳ ಜಮೀನುಗಳಲ್ಲಿ ಕಳೆದ ಮುರ್ನಾಲ್ಕು ತಿಂಗಳಿನಿಂದ ಆಗಾಗ್ಗೆ ಹುಲಿಹೆಜ್ಜೆ ಕಾಣಿಸಿಕೊಳ್ಳುತ್ತಿದ್ದರೆ, ಇದೀಗ ತಾಲೂಕಿನ ಹನಗೋಡಿನ ಜಮೀನಿನಲ್ಲಿ ಮತ್ತೆ ಮಂಗಳವಾರ ಹುಲಿ ಹೆಜ್ಜೆ ಕಾಣಿಸಿಕೊಂಡಿದ್ದು, ರೈತರು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು ಗ್ರಾಮದ ತಾ.ಪಂ.ಮಾಜಿ ಸದಸ್ಯ ಎಚ್.ಆರ್.ರಮೇಶ್ರವರ ತೋಟದಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿದೆ. ಈ ಹಿಂದೆ ಸಹ ಹನಗೋಡು, ಶಿಂಡೇನಹಳ್ಳಿ, ಅಬ್ಬೂರು, ಬಿ.ಆರ್.ಕಾವಲ್, ಶೆಟ್ಟಹಳ್ಳಿ, ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರ, ಬೀರತಮ್ಮನಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಜಮೀನುಗಳಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿತ್ತು.
ಜಾನುವಾರುಗಳನ್ನು ಸಹ ಕೊಂದು ಹಾಕಿತ್ತು. ಇದೀಗ ಮತ್ತೆ ಈ ಗ್ರಾಮಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿತ್ತು. ಆಗಾಗ್ಗೆ ಹುಲಿ ಕಾಣಿಸಿದ್ದು. ಅನಾಹುತವಾಗುವ ಮೊದಲೇ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಎಚ್ಚರವಹಿಸಿ, ಡಿಸಿಎಫ್ ಮನವಿ:
ಹುಲಿ ಹೆಜ್ಜೆ ಕಾಣಿಸಿಕೊಂಡಿರುವ ಕಡೆಗಳಲ್ಲಿ ಹುಲಿ ಪತ್ತೆಗಾಗಿ ಕ್ಯಾಮರಾ ಅಳವಡಿಸಲಾಗುವುದು, ಗ್ರಾಮಸ್ಥರು, ರೈತರು ಈ ಬಗ್ಗೆಎಚ್ಚರಿಕೆಯಿಂದಿರುವಂತೆ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಸೀಮಾ ಮನವಿ ಮಾಡಿದ್ದಾರೆ.