ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕೃಷ್ಣರಾಜ ಸಾಗರದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಕಾವೇರಿ ನದಿಯ ಹೊರಹರಿವು ತೀವ್ರವಾಗಿದ್ದು, ಜಲಾಶಯದಿಂದ ಜುಲೈ 31ರ ಬುಧವಾರ ಸಂಜೆಯಿಂದಲೇ ಸುಮಾರು 1,70,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಹರಿಸಲಾಗಿರುತ್ತದೆ.
ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ಸ್ಥಳಗಳಾದ ಕೆ.ಆರ್.ಎಸ್ ಜಲಾಶಯ, ಬೃಂದಾವನ ಉದ್ಯಾನ, ಪಶ್ಚಿಮವಾಹಿನಿ, ಗೋಸಾಯ್ ಘಾಟ್, ಬಲಮುರಿ ಎಡಮುರಿ, ವೆಲ್ಲೆಸ್ಲಿ ಸೇತುವೆ, ನಿಮಿಷಾಂಬ ದೇವಸ್ಥಾನದ ಪಕ್ಕದಲ್ಲಿರುವ ಸ್ನಾನ ಘಟ್ಟ, ರಂಗನತಿಟ್ಟು ಹಾಗೂ ಕೆ.ಆರ್.ಎಸ್ ಜಲಾಶಯದಿಂದ ಕಾವೇರಿ ನದಿಯ ಹೊರಹರಿವಿನ ಸುತ್ತಲಿನ ಸ್ಥಳಗಳ ವೀಕ್ಷಣೆಯನ್ನು ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಆಗಸ್ಟ್ 1 ಮತ್ತು 2 ರಂದು ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಕುಮಾರ ಅವರು ಆದೇಶ ಹೊರಡಿಸಿದ್ದಾರೆ.