ಕೊಪ್ಪಳ: ಕಾಂಗ್ರೆಸ್ ಸರ್ಕಾರ 200 ಯೂನಿಟ್ ವಿದ್ಯುತ್ ಉಚಿತ ಘೋಷಿಸಿದ ಬಳಿಕ ಹಲವಾರು ಅವಾಂತರಗಳು ಬೆಳಕಿಗೆ ಬರುತ್ತಿದ್ದು, ತಾಲೂಕಿನ ಭಾಗ್ಯನಗರದಲ್ಲಿರುವ ಕೇವಲ ಎರಡು ಬಲ್ಬ್ ಇರುವ ವೃದ್ಧೆಯೊಬ್ಬರ ಮನೆಗೆ ಬರೊಬ್ಬರಿ 1 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ.
ಈ ಹಿರಿ ಜೀವದ ಹೆಸರು ಗಿರಿಜಮ್ಮ, ಇವರ ಮನೆಗೆ ಬಂದಿರುವ ಕರೆಂಟ್ ಬಿಲ್ ಮೊತ್ತ ಕೇಳಿ ಶಾಕ್ ಗೆ ಒಳಗಾಗಿದ್ದಾರೆ.
ಈ ಅಜ್ಜಿ ಇರೋದು ಒಂದು ತಗಡಿನ ಶೆಡ್ ನಲ್ಲಿ, ಈ ಯಮ್ಮ ಬಳಸೋದು ಎರಡೇ ಎರಡು ಬಲ್ಬ್. ಆದರೆ, ಈ ಅಜ್ಜಿಯ ಮನೆಗೆ ಬಂದಿರೋ ಬಿಲ್ ಮಾತ್ರ ಬರೋಬ್ಬರಿ 1,03,316 ರೂಪಾಯಿ.
ಈ ವೃದ್ದೆಯ ಮನೆಗೆ ಸರಕಾರ ಭಾಗ್ಯಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ನೀಡಿತ್ತು.
ಪ್ರತಿ ತಿಂಗಳು 70 ರಿಂದ 80 ರೂ ಬಿಲ್ ಬರ್ತಾಯಿತ್ತು. ಈ ಮನೆಯಲ್ಲಿ ಇರೋದು ಈ ಅಜ್ಜಿ ಮತ್ತು ಆಕೆಯ ಮಗ ಇಬ್ಬರೆ. ಇವರು ಮನೆಯಲ್ಲಿ ಬಳಸೋದು ಕೂಡಾ ಕೇವಲ ಎರಡು ಬಲ್ಬ್ ಮಾತ್ರ, ಭಾಗ್ಯ ಜ್ಯೋತಿ ಯೋಜನೆಯ ಪ್ರಕಾರ 18 ಯೂನಿಟ್ ವಿದ್ಯುತ್ ಗೆ ಸರಕಾರವೇ ಪಾವತಿ ಮಾಡುತ್ತದೆ. ಆದರೆ, ಕಳೆದ ಆರು ತಿಂಗಳ ಹಿಂದೆ ಈ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಕೆ ಮಾಡಿದ್ದಾರೆ.
ಮೀಟರ್ ಹಾಕಿದಾಗಿಂದ ಈ ಮನೆಗೆ ಬರುತ್ತಿರುವ ಬಿಲ್ ಹತ್ತರಿಂದ ಇಪ್ಪತ್ತು ಸಾವಿರ ದಾಟಿ ಲಕ್ಷದವರೆಗೆ ಬಂದು ನಿಂತಿದೆ.
ಸಮಸ್ಯೆ ನಿವಾರಿಸಿದ ಚೆಸ್ಕಾಂ ಅಧಿಕಾರಿಗಳು
ವೃದ್ಧೆಯ ನಿವಾಸಕ್ಕೆ ಖುದ್ದು ಜೆಸ್ಕಾಂ ಅಧಿಕಾರಿಗಳು ಭೇಟಿ ದೌಡಾಯಿಸಿದ್ದಾರೆ. ಕೊಪ್ಪಳದ ಭಾಗ್ಯನಗರದಲ್ಲಿರುವ ಗಿರಿಜಮ್ಮನ ಮನೆಗೆ ಜೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ರಾಜೇಶ ಭೇಟಿ ನೀಡಿದ್ದು, ಮನೆಯ ಮೀಟರ್ ಪರೀಶಿಲನೆ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜೇಶ, 2021ರಿಂದ ಮೀಟರ್ ರೀಡಿಂಗ್ ತೊಂದರೆಯಿಂದ ಬಿಲ್ ಬಂದಿದೆ. ಅಜ್ಜಿ ಗಿರಿಜಮ್ಮ ವಿದ್ಯುತ್ ಬಿಲ್ ಪಾವತಿ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಸಿಬ್ಬಂದಿ ಹಾಗೂ ಬಿಲ್ ಕಲೆಕ್ಟರ್ ತಪ್ಪಿನಿಂದಾಗಿ ಹೀಗಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇಂತಹ ಯಾವುದೇ ಪ್ರಕರಣಗಳಿದ್ದರೂ ನಮ್ಮ ಗಮನಕ್ಕೆ ತನ್ನಿ ಎಂದು ಸ್ಪಷ್ಟಪಡಿಸಿದರು.