ಮಂಗಳೂರು(ದಕ್ಷಿಣ ಕನ್ನಡ): ಹಜ್ಜ್ ಎಂಬುದು ಮುಸಲ್ಮಾನರಿಗೆ ಪ್ರಮುಖ ಕರ್ಮವಾಗಿದೆ. 2024ನೇ ಸಾಲಿನ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 1944 ಹಜ್ ಯಾತ್ರಿಕರು ಹೊರಡುತ್ತಿದ್ದಾರೆ. ಈಗಾಗಲೇ ಅವರೆಲ್ಲರಿಗೂ ರೋಗ ನಿರೋಧಕವನ್ನು ಮುನ್ನೆಚ್ಚರಿಕೆಯಾಗಿ ಲಸಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಮೇ 9ಕ್ಕೆ ಮೊದಲ ತಂಡದ ಪ್ರಯಾಣ ಬೆಂಗಳೂರಿನಿಂದ ಹೊರಡಲಿದೆ.
ತದನಂತರ ದಿನಗಳಲ್ಲಿ ಬೇರೆ ಬೇರೆ ತಂಡಗಳಾಗಿ ಪ್ರಯಾಣ ಹೊರಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಮಾಹಿತಿ ನೀಡಿದ್ದಾರೆ. ಅವರು ಇಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ಜಾಜ್ ಗಳು ಯಾತ್ರೆ ಹೋಗುತ್ತಿದ್ದರು. ಆದರೆ ಕೋರೋನಾ ನಂತರ ಇದು ಸ್ಥಗಿತಗೊಂಡು ಬೆಂಗಳೂರು ಹಾಗೂ ಕೇರಳ ಮೂಲಕ ಯಾತ್ರೆ ಕೈಗೊಳ್ಳಲಾಗುತ್ತಿದೆ. ಇದರಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದರೂ, ಜಿಲ್ಲೆಯ ಹಜ್ ಯಾತ್ರಿಗಳು ದೂರದ ಪ್ರದೇಶದಿಂದ ಹೋಗುತ್ತಿದ್ದಾರೆ. ಮುಂದಿನ ವರ್ಷದಿಂದ ಹಜ್ ಯಾತ್ರೆ ಮಂಗಳೂರು ವಿಮಾನನಿಲ್ದಾಣದಿಂದಲೇ ಆರಂಭಿಸಲು ಕೇಂದ್ರ ಸರಕಾರದೊಂದಿಗೆ ವ್ಯವಹರಿಸಲಾಗುವುದು.
ಪ್ರತಿದಿನ ಹಜ್ ಯಾತ್ರಾರ್ಥಿಗಳಿಗೆ ಯಾತ್ರೆ ಯ ವಿವರಗಳು ಬರುತ್ತಿರುತ್ತವೆ. ಮುಖ್ಯವಾಗಿ ತಮ್ಮ ಯಾತ್ರೆಯ ಮುಂಚಿನ ದಿವಸ ಬ್ಯಾಗೇಜ್ ನೀಡಿ ಹಾಗೂ ಅವರವರ ವರದಿಗಳನ್ನು ಒಪ್ಪಿಸಿ ಪಾಸ್ ಪೋರ್ಟ್ ಪಡೆದುಕೊಳ್ಳಬೇಕಾಗುತ್ತದೆ. ಮರುದಿವಸ ಬೆಂಗಳೂರು ಹಜ್ ಭವನದಿಂದಲೇ ವಿಮಾನ ನಿಲ್ದಾಣ ಕ್ಕೆ ಬಸ್ ವ್ಯವಸ್ಥೆ ಹಜ್ ಸಮಿತಿ ಮಾಡಿದೆ. ಆದುದರಿಂದ ತಮ್ಮ ಪ್ರಯಾಣ ಸಮಯಕ್ಕೆ ತಾವುಗಳು ತಮ್ಮ ವಾಹನದಿಂದ, ಬಸ್ಸಿನಿಂದಲೂ ಅಥವಾ ರೈಲು ನಿಂದಲೂ ತಮಗೆ ಸೂಚಿಸಿದ ಬೆಂಗಳೂರು ಹಜ್ ಭವನಕ್ಕೆ ೪೮ ಗಂಟೆಗಳ ಮುಂಚೆ ತಲುಪುವಂತೆ ಎಲ್ಲರೂ ಎಚ್ಚರ ವಹಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಹೆಜ್ಜೆ ಸಮಿತಿ ಸದಸ್ಯರು ಸಯ್ಯದ್ ಅಶ್ರಫ್ ಅಸ್ಸಖಾಫ್ ತಂಬಲ್ ಅದೂರು, ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಎಸ್ ಎಮ್ ರಶೀದ್ ಹಾಜಿ, ಟಿ.ಎಸ್ ಬಶೀರ್ ಅಲಿ ಹನೀಫ್ ಗೊಳ್ತಮಜಲು, ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.