ಮೈಸೂರು: ಭಾರತದಲ್ಲಿ ಪ್ರತಿ ವರ್ಷ ಸರಾಸರಿ ೨೪ ಸಾವಿರ ಜನರು ಬ್ರೈನ್ ಟ್ಯೂಮರ್ಗೆ ಬಲಿಯಾಗುತ್ತಿದ್ದಾರೆ. ಇದು ಶೇ.೨ರಷ್ಟು ಮಾರಣಾಂತಿಕ ಕಾಯಿಲೆ ಆಗಿದೆ ಎಂದು ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ (ಬಿಎಚ್ಐಒ) ಕನ್ಸಲ್ಟೆಂಟ್ ರೇಡಿಯೇಶನ್ ಆಂಕೊಲಾಜಿಸ್ಟ್ ಡಾ.ವಿನಯಕುಮಾರ್ ಮುತ್ತಗಿ ಹೇಳಿದರು.
ಇಂದು ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಕ್ಯಾನ್ಸರ್ ರಿಜಿಸ್ಟ್ರೀಸ್ (ಐಎಆರ್ಸಿ) ಪ್ರಕಾರ ಭಾರತದಲ್ಲಿ ಒಂದು ವರ್ಷಕ್ಕೆ ೨೮ ಸಾವಿರಕ್ಕೂ ಹೆಚ್ಚು ಮೆದುಳಿನ ಗೆಡ್ಡೆ ಪ್ರಕರಣಗಳು ದಾಖಲಾಗುತ್ತಿವೆ. ವರ್ಷಕ್ಕೆ ೨೪ ಸಾವಿರ ರೋಗಿಗಳು ಸಾಯುತ್ತಿದ್ದಾರೆ. ಯುವ ಮತ್ತು ಮಧ್ಯ ವಯಸ್ಕರಲ್ಲಿ ಬ್ರೈನ್ ಟೂಮರ್ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು, ಮಾರಣಾಂತಿಕ ಕಾಯಿಲೆಯಾಗಿ ರೂಪುಗೊಂಡಿದೆ. ಇತರೆ ಕಾಯಿಲೆಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣವೂ ಹೆಚ್ಚಿದೆ. ವಾರ್ಷಿಕವಾಗಿ ಸುಮಾರು ೧೨೦ಕ್ಕೂ ಹೆಚ್ಚು ವಿಭಿನ್ನ ಮೆದುಳಿನ ಗೆಡ್ಡೆ ಪ್ರಕರಣಗಳು ದಾಖಲಾಗುತ್ತಿವೆ” ಎಂದು ಮಾಹಿತಿ ನೀಡಿದರು.
“ಹೆಚ್ಚಿನ ಗೆಡ್ಡೆಗಳು ಯಾವ ಸ್ಥಳದಲ್ಲಿ ಇದೆ ಎಂಬುದರ ಮೇಲೆ ರೋಗಲಕ್ಷಣಗಳು ಇರುತ್ತವೆ. ಸಾಮಾನ್ಯವಾಗಿ ತಲೆನೋವು, ವಾಂತಿ, ದೃಷ್ಟಿ ಮಂದವಾಗುವುದು, ಜ್ಞಾಪಕ ಶಕ್ತಿ ನಷ್ಟ, ಅಸ್ಪಷ್ಟ ಮಾತು, ಕೈ ಮತ್ತು ಕಾಲುಗಳಲ್ಲಿ ದೌರ್ಬಲ್ಯ ಮತ್ತು ದೇಹದಲ್ಲಿ ಅಸಮತೋಲನ ಕಂಡುಬರುತ್ತದೆ. ಸಾಮಾನ್ಯ ಚಿಕಿತ್ಸಾ ಆಯ್ಕೆಗಳು, ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು ಕೀಮೋಥೆರಪಿಯನ್ನು ಇದು ಒಳಗೊಂಡಿರುತ್ತದೆ. ಈ ಗೆಡ್ಡೆಗಳು ಮೆಟಾಸ್ಟಾಟಿಕ್ ಅಲ್ಲದ ಇತರ ಗೆಡ್ಡೆಗಳಿಗಿಂತ ಭಿನ್ನವಾಗಿರುತ್ತವೆ. ಜೊತೆಗೆ ಅದೇ ಸ್ಥಳದಲ್ಲಿ ಮರುಕಳಿಸುತ್ತವೆ. ಶಸ್ತ್ರಚಿಕಿತ್ಸಾ ನಂತರವೂ ಶೇ.೫ರಿಂದ ೨೦ ರಷ್ಟು ಪ್ರಕರಣಗಳಲ್ಲಿ ಗೆಡ್ಡೆ ಮತ್ತೆ ಬರುವ ಸವಾಲು ಕೂಡ ಇರುತ್ತದೆ ಎಂದು ಹೇಳಿದರು.
ಸ್ಟಿರಿಯೊಟ್ಯಾಕ್ಟಿಕ್ ರೇಡಿಯೊ ಥೆರಪಿಯಂತಹ ನವೀನ ತಂತ್ರಜ್ಞಾನದಿಂದ ಕೆಲವು ಭಿನ್ನ ಬ್ರೇನ್ ಟ್ಯೂಮರ್ ಮತ್ತು ಮರುಕಳಿಸುವ ಮಾರಣಾಂತಿಕ ಗೆಡ್ಡೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಇದು ರೋಗಿಗಳಿಗೆ ಹೊಸ ಭರವಸೆಯನ್ನು ತರುತ್ತದೆ. ಈ ರೇಡಿಯೊಥೆರಪಿಯು ನಿಖರವಾಗಿ ಗೆಡ್ಡೆಗೆ ಚಿಕಿತ್ಸೆ ತಲುಪಿಸುತ್ತದೆ ಮತ್ತು ಸಾಮಾನ್ಯ ಮೆದುಳಿಗೆ ಡೋಸ್ ಅನ್ನು ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಎಚ್ ಐಒನ ಹಿರಿಯ ವಿಕಿರಣ ಆಂಕೊಲಾಜಿಸ್ಟ್ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ. ಮಾಧವಿ, ಪ್ರತಿ ತಿಂಗಳು ಸರಾಸರಿ ೮ ರಿಂದ ೧೦ ಹೊಸ ಮೆದುಳಿನ ಗೆಡ್ಡೆಯ ಪ್ರಕರಣಗಳು ವರದಿಯಾಗುತ್ತಿವೆ.. ಸುಧಾರಿತ ರೇಡಿಯೊಥೆರಪಿ ಚಿಕಿತ್ಸೆಗೆ ಸಂಬಂಧಿಸಿದ ರೋಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಉತ್ತಮ ಫಲಿತಾಂಶಗಳಿಗಾಗಿ ಬ್ರಾಕಿಥೆರಪಿ, ಆಣ್ವಿಕ ನಿರ್ದೇಶನದ ಚಿಕಿತ್ಸೆಗಳ ಕಡೆಗೆ ಸಂಶೋಧನೆಯ ವ್ಯಾಪ್ತಿ ಅಗತ್ಯವಿದೆ” ಎಂದು ತಿಳಿಸಿದರು.
ಬ್ರೈನ್ ಟೂಮರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ರೋಗಲಕ್ಷಣಗಳು, ಲಭ್ಯವಿರುವ ಚಿಕಿತ್ಸೆಗಳು ಮತ್ತು ಚಿಕಿತ್ಸಾ ತಂತ್ರಗಳನ್ನು ಪ್ರಚುರಪಡಿಸಲು ಪ್ರತಿ ವರ್ಷ ಜೂನ್ ೮ ರಂದು ವಿಶ್ವ ಮೆದುಳಿನ ಗೆಡ್ಡೆ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಥೀಮ್ ‘ಮೆದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆ. ಪ್ರಪಂಚದಾದ್ಯಂತದ ನರವಿಜ್ಞಾನಿಗಳು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಲು ಒತ್ತಡವು ಪ್ರಮುಖ ಕಾರಣವೆಂದು ಹೇಳುತ್ತಾರೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಶಿಫಾರಸು ಮಾಡುತ್ತಾರೆ. ೩೦ ರಿಂದ ೪೦ ನಿಮಿಷಗಳ ಮಧ್ಯಮ ವ್ಯಾಯಾಮ, ೬ ರಿಂದ ೮ ಗಂಟೆಗಳ ನಿದ್ದೆ ಮತ್ತು ಮೊಬೈಲ್ ನೋಡುವ ಸಮಯವನ್ನು ಕಡಿಮೆ ಮಾಡುವುದು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಬಿಎಚ್ಐಒ ಸಿಒಒ ಗೌತಮ್ ಧಮೇರ್ಲಾ, ಆನಂದ್ ಹಾಜರಿದ್ದರು.