ನವದೆಹಲಿ:ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಕಾವೇರಿ ನದಿ ನೀರಿನ ವಿವಾದ ತಾರಕಕ್ಕೇರಿದೆ. ಈ ವಿಚಾರಕ್ಕೆ ಸಂಬoಧಿಸಿದoತೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೋಮವಾರ ನಡೆಸಿದ ಸಭೆ ಅಂತ್ಯವಾಗಿದೆ. ಕರ್ನಾಟಕಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆ ಶಾಕ್ ನೀಡಿದ್ದು, ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಜ್ಯದಲ್ಲಿ ಸರಿಯಾಗಿ ಮಳೆಯಾಗದ ಹಿನ್ನೆಲೆ, ಕೆಆರ್ ಎಸ್ ಜಲಾಶಯ ಭರ್ತಿಯಾಗದೇ ಕಾವೇರಿ ಜಲಾನಯನ ಪ್ರದೇಶದ ರೈತರು ಜನರಿಗೆ ಆತಂಕ ಶುರುವಾಗಿದೆ. ಈ ಮಧ್ಯೆಯೂ ಇದೀಗ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ.
ಕಾವೇರಿ ನದಿ ನೀರು ವಿವಾದ ಸಂಬಂಧ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆ ಮುಕ್ತಾಯವಾಗಿದ್ದು, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಪ್ರಾಧಿಕಾರ ಸೂಚನೆ ನೀಡಿದೆ.
ಸದ್ಯ ತಮಿಳುನಾಡಿಗೆ ಪ್ರತಿ ದಿನ 1,900 ಕ್ಯೂಸೆಕ್ ನೀರು ಕರ್ನಾಟಕದಿಂದ ಹರಿಯುತ್ತಿದೆ. ಈಗ ಸಿಡಬ್ಲೂಎಂಸಿ ಸಭೆಯಲ್ಲಿ ಹೆಚ್ಚುವರಿಯಾಗಿ 3,100 ಕ್ಯೂಸೆಕ್ ನೀರನ್ನು ಹರಿಸಬೇಕಾದ ಅನಿವಾರ್ಯತೆಗೆ ಕರ್ನಾಟಕ ಸಿಲುಕಿದೆ.
ಬಿಳಿಗುಂಡ್ಳು ಮಾಪನ ಕೇಂದ್ರದಲ್ಲಿ 5 ಸಾವಿರ ಕ್ಯೂಸೆಕ್ ನೀರು ಹರಿಯಬೇಕಿದೆ ಎಂದು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ತನ್ನ ಸಭೆಯಲ್ಲಿ ತಿಳಿಸಿದೆ. ಇದರ ಬೆನ್ನಲ್ಲಿಯೇ ಮಂಗಳವಾರ ದಿಲ್ಲಿಯಲ್ಲಿ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಡಬ್ಲೂಎಂಸಿ ಸೂಚಿಸಿರುವಷ್ಟು ನೀರು ಬಿಡಲು ಆಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ವಾದಿಸಲಿದೆ. ಮಂಗಳವಾರ ಪ್ರಾಧಿಕಾರದ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ತಮಿಳುನಾಡು: ತಮಿಳುನಾಡು ಸರ್ಕಾರ ಕರ್ನಾಟಕದಿಂದ ಪ್ರತಿದಿನ 24,000 ಕ್ಯೂಸೆಕ್ ಹರಿಸಬೇಕು ಎಂದು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿತ್ತು. ಇದಕ್ಕೆ ಅಫಿಡವಿಟ್ ಸಲ್ಲಿಸಿದ್ದ ಕರ್ನಾಟಕ ಸರ್ಕಾರ, ಈ ವರ್ಷ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಮಳೆ ಕೊರತೆಯ ಹಿನ್ನೆಲೆ ನಮ್ಮ ರೈತರಿಗೂ ನೀರಿನ ಅವಶ್ಯಕತೆ ಇದೆ. ಆದ್ದರಿಂದ ತಮಿಳುನಾಡು ಕೇಳಿರುವಷ್ಟು ನೀರನ್ನು ಬಿಡಲು ಆಗುವುದಿಲ್ಲ. ಅದಲ್ಲದೇ ತಮಿಳುನಾಡಿನ ಅರ್ಜಿ ಯಾವುದೇ ಕಾನೂನು ಆಧಾರ ಹೊಂದಿಲ್ಲ ಎಂದು ಕರ್ನಾಟಕ ತನ್ನ ಅಫಿಡವಿಟ್ನಲ್ಲಿ ಹೇಳಿತ್ತು. ಇದಾದ ಬಳಿಕ ಆಗಸ್ಟ್ 25ರಂದು ತಮಿಳುನಾಡು ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದ ವಾದ ಪ್ರತಿವಾದಗಳನ್ನು ನ್ಯಾ ಬಿಆರ್ ಗವಾಯಿ ನೇತೃತ್ವದ ಪೀಠ ಆಲಿಸಿತ್ತು. ಜೊತೆಗೆ ಮುಂದಿನ ಶುಕ್ರವಾರದೊಳಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ನಡೆಸಬೇಕು ಎಂದು ಸೂಚಿಸಿತ್ತು. ಈ ಆದೇಶದ ಅನ್ವಯ ಮಂಗಳವಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸುತ್ತಿದೆ.ಆದರೆ ಕೆಆರ್ ಎಸ್ ಭರ್ತಿಯಾಗದಿದ್ದರೂ ತಮಿಳುನಾಡಿಗೆ ನೀರು ಹರಿಸುವಂತೆ ಪ್ರಾಧಿಕಾರ ಸೂಚಿಸಿರುವುದು ರಾಜ್ಯದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.