ಬೆಂಗಳೂರು : ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಎಲ್ಪಿಜಿ ಅಭಾವವು ಇದೀಗ ಸಿಲಿಕಾನ್ ಸಿಟಿಯ ಪವಿತ್ರ ಧಾರ್ಮಿಕ ಕೇಂದ್ರಗಳ ಮೇಲೂ ಕರಿನೆರಳು ಬೀರಿದ್ದು, ನಗರದ ಸುಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ವಾಣಿಜ್ಯ ಸಿಲಿಂಡರ್ಗಳ ತೀವ್ರ ಕೊರತೆ ಎದುರಾಗಿದೆ.
ಇನ್ನೂ ಇದರ ನೇರ ಪರಿಣಾಮವಾಗಿ, ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಪವಿತ್ರ ಅನ್ನದಾಸೋಹಕ್ಕೆ ಇದೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅಮ್ಮನ ದರ್ಶನಕ್ಕೆ ಬರುವ ಸಾವಿರಾರು ಭಕ್ತರು ಪ್ರಸಾದವಿಲ್ಲದೆ ಬರಿಗೈಲಿ ಹಿಂದಿರುಗುವಂತಾಗಿದ್ದು, ಅಂತರಾಷ್ಟ್ರೀಯ ಮಟ್ಟದ ಬಿಕ್ಕಟ್ಟು ದೇವರ ಪ್ರಸಾದಕ್ಕೂ ಅಡ್ಡಿಯಾಗಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.
ಬನಶಂಕರಿ ದೇವಸ್ಥಾನದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಅಡುಗೆ ತಯಾರಿಸಲು ಹೆಚ್ಚಿನ ಸಂಖ್ಯೆಯ ವಾಣಿಜ್ಯ ಸಿಲಿಂಡರ್ಗಳ ಅವಶ್ಯಕತೆಯಿದ್ದು, ಸಮಯಕ್ಕೆ ಸರಿಯಾಗಿ ಗ್ಯಾಸ್ ಲಭ್ಯವಾಗದೇ ಅನಿವಾರ್ಯ ಕಾರಣಗಳಿಂದಾಗಿ ಅಡುಗೆ ತಯಾರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಿಲಿಂಡರ್ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಅನ್ನಪ್ರಸಾದ ವಿತರಣೆಯನ್ನು ಸ್ಥಗಿತಗೊಳಿಸಲು ದೇವಸ್ಥಾನದ ಮಂಡಳಿ ನಿರ್ಧರಿಸಿದೆ.
ಪೂರೈಕೆಯಲ್ಲಿ ವ್ಯತ್ಯಯ : ಯುದ್ಧದ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆ ವ್ಯವಸ್ಥೆ ಹದಗೆಟ್ಟಿದ್ದು, ಇದರಿಂದಾಗಿ ಭಾರತದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಕೊರತೆ ಉಂಟಾಗಿದೆ. ಬೆಂಗಳೂರಿನಲ್ಲಿ ಹೋಟೆಲ್ಗಳು ಕೂಡ ಸಿಲಿಂಡರ್ ಪೂರೈಕೆಯ ವ್ಯತ್ಯಯದ ಪರಿಣಾಮ ನಾಳೆಯಿಂದ ಮುಚ್ಚುಗಡೆ ಭೀತಿ ಎದುರಿಸುತ್ತಿವೆ.



