ಮಂಡ್ಯ: ಜಿಲ್ಲೆಯಲ್ಲಿ ಅರ್ಚಕನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಬಾರದೆಂದು ಪತ್ನಿಯೇ ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಲೆ ಮಾಡಿಸಿರುವ ಘಟನೆ ಮಂಡ್ಯದ ಮರಳಗಾಲ ಬಳಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದ್ದು, ಅವರು ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಪ್ರಕರಣದಲ್ಲಿ ಪತ್ನಿ ಶಾಲಿನಿ ಹಾಗೂ ಅವಳ ಪ್ರಿಯಕರ ಹರೀಶ್ ಮುಖ್ಯ ಆರೋಪಿಗಳಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ.
ಮಾರ್ಚ್ 6ರಂದು ಈ ಕೃತ್ಯ ನಡೆದಿದ್ದು, ಘಟನೆ ತಡವಾಗಿ ಬಹಿರಂಗವಾಗಿದೆ. ಶಾಲಿನಿ ಹಾಗೂ ಅದೇ ಗ್ರಾಮದ ಹರೀಶ್ ನಡುವೆ ಅಕ್ರಮ ಸಂಬಂಧವಿದ್ದು, ಒಂದೂವರೆ ವರ್ಷಗಳ ಹಿಂದೆ ಸಿದ್ದಲಿಂಗಪ್ಪನ ಕೈಗೆ ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಬಳಿಕ ಪತ್ನಿಗೆ ಹಲವು ಬಾರಿ ಬುದ್ಧಿವಾದ ಹೇಳಿ ಸರಿದಾರಿಗೆ ತರಲು ಸಿದ್ದಲಿಂಗಪ್ಪ ಯತ್ನಿಸಿದ್ದರು. ಆದರೆ ಇದರಿಂದ ಬೇಸತ್ತ ಶಾಲಿನಿ ತನ್ನ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.
ಪೂಜೆ ಕಾರ್ಯಕ್ಕಾಗಿ ಮರಳಗಾಲಕ್ಕೆ ತೆರಳಿದ್ದ ಸಿದ್ದಲಿಂಗಪ್ಪನ ಬಗ್ಗೆ ಶಾಲಿನಿ ಪ್ರಿಯಕರನಿಗೆ ಮೆಸೇಜ್ ಮಾಡಿದ್ದಳು. ನಂತರ ಬೈಕ್ನಲ್ಲಿ ನಾಲೆ ಏರಿ ಬರುತ್ತಿದ್ದ ಸಿದ್ದಲಿಂಗಪ್ಪನನ್ನು ಹರೀಶ್ ಹಾಗೂ ಅವನ ಇಬ್ಬರು ಸ್ನೇಹಿತರು ಅಡ್ಡಗಟ್ಟಿದರು. ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ, ಬಳಿಕ ಮೃತದೇಹವನ್ನು ನಾಲೆಗೆ ಎಸೆದು ಅಪಘಾತದಂತೆ ತೋರಿಸಲು ಯತ್ನಿಸಿದ್ದರು.
ಸಿದ್ದಲಿಂಗಪ್ಪ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಸಿಡಿಎಸ್ ನಾಲೆ ದಡದಲ್ಲಿ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿದ್ದವು. ನಂತರ ನಾಲೆಯಲ್ಲಿ ಮೃತದೇಹ ಮತ್ತು ಬೈಕ್ ಪತ್ತೆಯಾಯಿತು. ಸ್ಥಳ ಪರಿಶೀಲನೆ ವೇಳೆ ಚಪ್ಪಲಿ ಸಿಕ್ಕ ಜಾಗದಲ್ಲಿ ರಕ್ತದ ಕಲೆ ಕಂಡುಬಂದ ಹಿನ್ನೆಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಸಂಪೂರ್ಣ ರಹಸ್ಯ ಬಹಿರಂಗವಾಗಿದೆ.



