ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ಖಾಲಿ ಚೊಂಬಿನ ಬಜೆಟ್ನಂತಿದ್ದು, ಸಾಲದ ಮೇಲೆ ಎಲ್ಲವನ್ನೂ ಮಾಡಲಾಗಿದೆ ಎಂದು ಬಿಜೆಪಿಯ ಸಿ.ಟಿ.ರವಿ ಆರೋಪಿಸಿದರು.
ಈ ಬಗ್ಗೆ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಿ.ಟಿ.ರವಿ, ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ ಮಾಡುತ್ತಿರುವ ಸಾಲದ ಬಗ್ಗೆ ಜನರೂ ಮಾತನಾಡುತ್ತಿದ್ದಾರೆ. ಇನ್ನು ಕಳೆದ ಬಾರಿಯ ಬಜೆಟ್ ಅನುಷ್ಠಾನ ಗಮನಿಸಿದರೆ ಶೇ.60ರಷ್ಟು ಮಾತ್ರ ಅನುದಾನ ಬಳಕೆಯಾಗಿದೆ. ಇನ್ನೂ 1.31 ಲಕ್ಷ ಕೋಟಿ ರೂ. ಮೀಸಲಿಟ್ಟ ಅನುದಾನ ಖರ್ಚು ಮಾಡಬೇಕಿದೆ. ಅಷ್ಟು ಮೊತ್ತ ಬಳಕೆ ಮಾಡಬೇಕೆಂದರೆ ಸುಳ್ಳು ಲೆಕ್ಕ ಬರೆಯಬೇಕಾಗುತ್ತದೆ. ಅಲ್ಲದೆ, ಕಳೆದ ಜನವರಿವರೆಗೆ 2.44 ಲಕ್ಷ ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದು, ಅದರಲ್ಲೂ 35 ಸಾವಿರ ಕೋಟಿ ರೂ. ವೆಚ್ಚವಾಗಿಲ್ಲ. ಅಲ್ಲದೆ, ಆದಾಯ ಸಂಗ್ರಹದಲ್ಲೂ ಭಾರೀ ಕುಸಿತ ಕಂಡಿದೆ ಎಂದರು.
ರೈತರ ಆತ್ಮಹತ್ಯೆಗೆ ಪರಿಹಾರ ಸೂಚಿಸಿಲ್ಲ: ರೈತರ ಆತ್ಮಹತ್ಯೆ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, ರೈತರ ಆತ್ಮಹತ್ಯೆಗೆ ಏನು ಕಾರಣ ಎಂದು ತಿಳಿದು, ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಸರ್ಕಾರ ಮಾಡಿಲ್ಲ.
ಇನ್ನು ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳು ಸರ್ಕಾರಿ ಸಂಸ್ಥೆಗಳನ್ನು ನಿಶ್ಯಕ್ತಿಗೊಳಿಸಿವೆ. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಲಾಗಿದ್ದು, ಪ್ರಸಕ್ತ ವರ್ಷದಲ್ಲಿ 50 ಸಾವಿರ ಕೋಟಿ ರೂ.ಗಳನ್ನು ಬಡ್ಡಿ ರೂಪದಲ್ಲಿ ಪಾವತಿಸಬೇಕಿದೆ ಎಂದು ತಿಳಿಸಿದರು.
ಇನ್ನೂ ಈ ಕುರಿತು ಮಾತನಾಡಿರುವ ಕಾಂಗ್ರೆಸ್ನ ರಮೇಶ್ ಬಾಬು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಬಿದ ಕೊಡ ಇದ್ದ ಹಾಗೆ. ಅದಕ್ಕೆ ತಕ್ಕಂತೆ ಬಜೆಟ್ ಮಂಡಿಸಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ರಾಜ್ಯ ಸರ್ಕಾರದ ಸಾಲದ ಬಗ್ಗೆ ಟೀಕಿಸುವ ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರ ಮಾಡಿರುವ ಸಾಲವನ್ನೂ ನೋಡಲಿ. ಸದ್ಯ 200 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಸಾಲವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದರು.



