ಮೈಸೂರು: ನಾಡಹಬ್ಬ ದಸರಾ-2023ಗೆ ಸಕಲ ಸಿದ್ದತೆಗಳು ಪ್ರಾರಂಭವಾಗಿದ್ದು, ಸೆಪ್ಟೆಂಬರ್ 1ಕ್ಕೆ ಗಜ ಪಡೆಯ ಮೊದಲ ಟೀಂ ಮೈಸೂರಿಗೆ ಆಗಮಿಸಲಿದೆ.
ಈ ಕುರಿತು ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಮಾಹಿತಿ ನೀಡಿದ್ದು, ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಲ್ಲಿ ಸಂಪ್ರದಾಯಿಕವಾಗಿ ಗಜಪಡೆಗೆ ಸ್ವಾಗತ ಕೋರಲಾಗುತ್ತದೆ. ಮೊದಲ ಹಂತದಲ್ಲಿ 14 ಆನೆಗಳು ಗಜ ಪಯಣದ ಮೂಲಕ ಮೂಲಕ ಮೈಸೂರಿಗೆ ಬರುತ್ತವೆ ಎಂದಿದ್ದಾರೆ.
ದಸರಾಗೆ ವಿಶೇಷ ಅನುದಾನ ಕೇಳಿಲ್ಲ. ಅದ್ದೂರಿ ದಸರಾಗೆ ಬೇಕಾಗುವಷ್ಟು ಅನುದಾನ ಕೊಡುತ್ತೇವೆ. ದಸರಾ ಉದ್ಘಾಟಕರ ತೀರ್ಮಾನ ಸಿಎಂ ವಿವೇಚನೆಗೆ ಬಿಟ್ಟಿದ್ದೇವೆ.ಸಿಎಂ ಅವರೇ ಉದ್ಘಾಟಕರ ಹೆಸರು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಕುರಿತು ಮಾತನಾಡಿ, ಸಚಿವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಬಗ್ಗೆ ಯಾವ ಚರ್ಚೆಯು ಆಗಿಲ್ಲ. ಇದು ಕೇವಲ ಮಾಧ್ಯಮಗಳಲ್ಲಿ ಸುದ್ದಿಗಳು ಬರುತ್ತಿವೆ ಅಷ್ಟೇ. ನಮಗೆ ಅಂತಹ ಯಾವುದೇ ಸೂಚನೆಗಳು ಬಂದಿಲ್ಲ. ಪಕ್ಷದಲ್ಲೂ ಯಾವುದೇ ಚರ್ಚೆ ನಡೆದಿಲ್ಲ. ನಡೆಯದೆ ಇರುವ ಚರ್ಚೆ ನಿಮ್ಮ ಗಮನಕ್ಕೆ ಹೇಗೆ ಬಂತು ? ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸುನೀಲ್ ಬೋಸ್ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಕಳೆದ ಮೂರು ಬಾರಿಯೂ ಸುನೀಲ್ ಬೋಸ್ ಗೆ ಅವಕಾಶ ಸಿಕ್ಕಿಲ್ಲ. ಆದರೂ ಯಾವುದೇ ಬೇಸರವಿಲ್ಲದೆ ಪಕ್ಷ ಸಂಘಟನೆ ಮಾಡುತ್ತಿದ್ದಾನೆ. ಅವಕಾಶ ಸಿಕ್ಕರೆ ಸ್ಪರ್ಧೆ ಮಾಡುತ್ತಾನೆ. ಈ ವಿಚಾರವಾಗಿ ಇನ್ನೂ ಯಾವುದೇ ತೀರ್ಮಾನ ಪಕ್ಷದಲ್ಲಿ ಆಗಿಲ್ಲ ಎಂದು ಹೇಳಿದರು.
ನಟ ವಿಜಯರಾಘವೇಂದ್ರ ಪತ್ನಿ ನಿಧನಕ್ಕೆ ಸಚಿವ ಡಾ.ಎಚ್.ಸಿ ಮಹದೇವಪ್ಪ ಸಂತಾಪ ವ್ಯಕ್ತಪಡಿಸಿ, ಸಾವಿನ ದುಖ ಭರಿಸುವ ಶಕ್ತಿಯನ್ನ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸಿದರು.