ಚೆನ್ನೈ : ತಮಿಳುನಾಡು ಎಲೆಕ್ಷನ್ ರಣಾಂಗಣ ಕಾವೇರಿದ್ದು, ಪ್ರಚಾರದ ಭರಾಟೆ ಜೋರಾಗಿದೆ. ಎಲ್ಲಾ ಪಕ್ಷಗಳು ಮತದಾರರ ಮನಗೆಲ್ಲಲು ಆಫರ್ ಕೊಡುತ್ತೇವೆ. ಇದೀಗ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಪರ್ ಆಫರ್ ಕೊಟ್ಟಿದ್ದಾರೆ. ಚುನಾವಣೆ ಪ್ರಚಾರ ನಡೆಸುತ್ತಿರೋ ಉದಯನಿಧಿ, ಪಕ್ಷ ಅಧಿಕಾರಕ್ಕೆ ಬಂದರೆ ಗೃಹೋಪಯೋಗಿ ವಸ್ತುಗಳ ಖರೀದಿಗೆ ₹8000ದ ಕೂಪನ್ಗಳನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಇದರಿಂದ ಜನರು ಟಿವಿ, ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ಗಳಂತಹ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದಿದ್ದಾರೆ. ಉದಯನಿಧಿಯವರ ಈ ಘೋಷಣೆಯಿಂದ ಹೊಸ ಸೆಕೆ ಆರಂಭವಾಗಿದ್ದು, ಇನ್ನು, ಸರ್ಕಾರದ ಅಡಿಯಲ್ಲಿ 10 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ಒದಗಿಸಲಾಗಿದೆ. ಜನರ ನಂಬಿಕೆಯನ್ನು ಡಿಎಂಕೆ ಉಳಿಸಿಕೊಂಡಿದ್ದು, ಖಂಡಿತ ಎಲೆಕ್ಷನ್ನಲ್ಲಿ ಬೆಂಬಲ ಸಿಗಲಿದೆ ಎಂದು ಉದಯನಿಧಿ ಹೇಳಿದರು.
ತಿರುಪತ್ತೂರು ವಿಧಾನಸಭಾ ಅಭ್ಯರ್ಥಿ ನಲ್ಲತಂಬಿ ಹಾಗೂ ಜೋಲಾರಪೇಟೆ ವಿಧಾನಸಭಾ ಅಭ್ಯರ್ಥಿ ಕವಿತಾ ದಂಡಪಾಣಿ ಪರ ನಾಟ್ರಂಪಳ್ಳಿ ಬಸ್ ನಿಲ್ದಾಣದಲ್ಲಿ ಮತ ಪ್ರಚಾರದಲ್ಲಿ ಉದಯನಿಧಿ ಪಾಲ್ಗೊಂಡಿದ್ದರು. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರನ್ನು ಎಲ್ಲಾ ಕ್ಷೇತ್ರಗಳಲ್ಲಿ ಸೋಲಿಸಬೇಕು. ತಮಿಳುನಾಡು ಜನರನ್ನು ಕಾಪಾಡುವುದು ಡಿಎಂಕೆ ಮಾತ್ರ ಎಂದು ವಾಗ್ದಾಳಿ ನಡೆಸಿದ್ದಾರೆ. ಈಗಾಗಲೇ ಮಹಿಳೆಯರಿಗೆ ₹1000 ರೂ ಜಾರಿಯಾಗುತ್ತಿದ್ದು, ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ₹2000ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.



