ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 3 ರೂಪಾಯಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದು, ದೇಶದ ಆರ್ಥಿಕತೆಯನ್ನು ದುರುಪಯೋಗವಾಗಿ ನಿರ್ವಹಿಸಿ ಜನರನ್ನು ವಿಫಲಗೊಳಿಸಿರುವ ಕಾರಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಕ್ಷಣ ರಾಜೀನಾಮೆ ನೀಡಬೇಕು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುವ ಮೂಲಕ ಮೋದಿ ಸರ್ಕಾರ ತನ್ನ ವೈಫಲ್ಯಗಳ ಭಾರವನ್ನು ಜನರ ಮೇಲೆ ಹಾಕುತ್ತಿದೆ. ಕೇಂದ್ರ ಸರ್ಕಾರದ ವಿಫಲ ವಿದೇಶಾಂಗ ನೀತಿ, ದುರ್ಬಲ ಆರ್ಥಿಕ ನಿರ್ವಹಣೆ ಮತ್ತು ಬೆಲೆ ಏರಿಕೆಯ ಹೊರೆ ಜನರು ಅನುಭವಿಸುತ್ತಿದ್ದಾರೆ. ಜನರನ್ನು ರಕ್ಷಿಸುವ ಬದಲು, ಮೋದಿ ಸರ್ಕಾರ ಅವರನ್ನು ಆದಾಯ ಸಂಗ್ರಹಿಸುವ ಸಾಧನವಾಗಿ ಬಳಸುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 106 ರೂಪಾಯಿ ಮತ್ತು ಡೀಸೆಲ್ ಬೆಲೆ ಸುಮಾರು 94 ರೂಪಾಯಿಯಷ್ಟಿದೆ. ಈ ಬೆಲೆ ಏರಿಕೆ ಪೆಟ್ರೋಲ್ ಬಂಕ್ಗಳಲ್ಲೇ ನಿಲ್ಲುವುದಿಲ್ಲ. ಇದರಿಂದ ಸಾರಿಗೆ ವೆಚ್ಚ, ತರಕಾರಿ, ಹಾಲು ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತದೆ. ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಮಧ್ಯಮ ವರ್ಗದ ಜನರು ತೀವ್ರ ಹೊಡೆತ ಅನುಭವಿಸಲಿದ್ದಾರೆ ಎಂದು ಕಿಡಿಕಾರಿದರು.
ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದಾಗ ಮೋದಿ ಸರ್ಕಾರ ಜನರಿಗೆ ಯಾವುದೇ ಪರಿಹಾರ ನೀಡಲಿಲ್ಲ. ಬೃಹತ್ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಿ ತನ್ನ ಖಜಾನೆಯನ್ನು ತುಂಬಿಕೊಂಡಿತು. ಆದರೆ ಇಂಧನದ ಬೆಲೆ ಏರಿದಾಗ ಜನರನ್ನೇ ಗುರಿಯಾಗಿಸುತ್ತದೆ. ಇದು ಆಡಳಿತವಲ್ಲ, ಶೋಷಣೆ ಎಂದು ಅವರು ಆರೋಪಿಸಿದರು.



