ಮೈಸೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ.ಜಾತಿ, ಪ.ಪಂಗಡಗಳ ಕಲ್ಯಾಣನಿಧಿ ಅಡಿಯಲ್ಲಿ ಜೀವ ವಿಮಾ, ಆರೋಗ್ಯ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಪ.ಜಾತಿ, ಪ.ಪಂಗಡಗಳ ನಾಗರಿಕ ಹಕ್ಕು ಹೋರಾಟ ಸಮಿತಿ ವತಿಯಿಂದ ನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಪ.ಜಾತಿ, ಪ.ಪಂಗಡ ಜನಾಂಗದವರಿಗೆ ನೀಡಬೇಕಾದ ಹಲವು ಸೌಲಭ್ಯಗಳನ್ನು, ಅತಿ ಮುಖ್ಯವಾದ ವೈದ್ಯಕೀಯ ಆರೋಗ್ಯ ಜೀವ ವಿಮೆ ಮಾಡಿಕೊಡುವಂತೆ ಆದೇಶಿಸಿ ೪ ವರ್ಷಗಳಾಗಿದೆ. ಆದರೂ ನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಯುಕ್ತರು, ಹೆಚ್ಚುವರಿ ಆಯುಕ್ತರು, ಸಹಾಯಕ ಆಯುಕ್ತರು ಪ.ಜಾತಿ, ಪ.ಪಂಗಡದವರಿಗೆ ಶೇ.೨೪.೧೦ರ ಅಡಿಯಲ್ಲಿ ಸೌಲಭ್ಯ ನೀಡದೆ ಈ ಜನಾಂಗದವರಿಗೆ ಮತ್ತು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಯೋಜನೆ ಕುರಿತು ಅರಿವು ಮೂಡಿಸಲು ಸೂಚನಾ ಫಲಕ, ಜಾಲತಾಣ, ರಾಜ್ಯ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಚಾರಗೊಳಿಸುವಂತೆ ಆದೇಶದಲ್ಲಿ ಸೂಚಿಸಿದ್ದರೂ ಯಾವುದೇ ಪ್ರಚಾರ ಕಾರ್ಯ ಕೈಗೊಂಡಿಲ್ಲ. ಪ.ಜಾತಿ, ಪ.ಪಂಗಡ ಜನಾಂಗದ ಮತ ಪಡೆದು ಜಯಗಳಿಸಿದ ನಗರ ಪಾಲಿಕೆ ಸದಸ್ಯರು ಇಂತಹ ಸೌಲಭ್ಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಇಂತಹ ಸೇವಾ ಕಾರ್ಯವನ್ನು ಜನಸಾಮಾನ್ಯರಿಗೆ ಒದಗಿಸಿಕೊಡದೆ ಕೇವಲ ಲಾಭದಾಯಕ ಕಾರ್ಯಕ್ರಮ ರೂಪಿಸಿಕೊಂಡು ತಮ್ಮ ಅಧಿಕಾರದ ಅವಧಿಯನ್ನು ವೈಭವಿಸಿಕೊಳ್ಳುತ್ತಿದ್ದಾರೆ. ಇನ್ನಾದರೂ ಸೌಲಭ್ಯ ಕೊಡಿಸಲು ಮುಂದಾಗಲಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಜಯಶಂಕರ ಶ್ಯಾಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.