ಅಹ್ಮದಾಬಾದ್ : ಐಪಿಎಲ್ 2026ರ ಫೈನಲ್ ಪಂದ್ಯ ಮುಗಿದ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡದ ಆಟಗಾರರಿಗೆ ದೊಡ್ಡ ಆಘಾತವೊಂದು ಎದುರಾಗಿದೆ. ಪಂದ್ಯ ಮುಗಿಸಿ ನರೇಂದ್ರ ಮೋದಿ ಕ್ರೀಡಾಂಗಣದಿಂದ ಹೋಟೆಲ್ಗೆ ಮರಳುತ್ತಿದ್ದ ಗುಜರಾತ್ ಟೈಟಾನ್ಸ್ ತಂಡದ ಬಸ್ಗೆ ಹಠಾತ್ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್, ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿಕೊಂಡ ಬೆಂಕಿ
ವರದಿಗಳ ಪ್ರಕಾರ, ಬಸ್ ಚಲಿಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಈ ಬೆಂಕಿ ಕಾಣಿಸಿಕೊಂಡಿದೆ. ಬಸ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣವೇ ಎಚ್ಚೆತ್ತ ಸಿಬ್ಬಂದಿ, ಬಸ್ನಲ್ಲಿದ್ದ ಎಲ್ಲಾ ಆಟಗಾರರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಯಾವುದೇ ಆಟಗಾರನಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಇದು ಗುಜರಾತ್ ಅಭಿಮಾನಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಭಾನುವಾರ ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿ ತನ್ನ ಎರಡನೇ ಟ್ರೋಫಿ ಗೆದ್ದುಕೊಂಡಿತ್ತು. ಈ ಸೋಲಿನ ಬೆನ್ನಲ್ಲೇ ಆಟಗಾರರಿಗೆ ಈ ಕಹಿ ಅನುಭವ ಎದುರಾಗಿದೆ.
ರಸ್ತೆಯಲ್ಲೇ 1 ಗಂಟೆ ಕಳೆದ ಆಟಗಾರರು
ಬೆಂಕಿ ಕಾಣಿಸಿಕೊಂಡ ತಕ್ಷಣ ಆಟಗಾರರನ್ನು ಹೊರತರಲಾಯಿತಾದರೂ, ಅವರೆಲ್ಲರೂ ಸುಮಾರು ಒಂದು ಗಂಟೆಯ ಕಾಲ ರಸ್ತೆಯಲ್ಲೇ ಸಿಲುಕಿಕೊಳ್ಳಬೇಕಾಯಿತು. ನಂತರ ಪರ್ಯಾಯ ವಾಹನದ ವ್ಯವಸ್ಥೆ ಮಾಡಿ, ಆಟಗಾರರನ್ನು ಸುರಕ್ಷಿತವಾಗಿ ಹೋಟೆಲ್ಗೆ ತಲುಪಿಸಲಾಯಿತು. ಸೋಲಿನ ನಿರಾಸೆಯಲ್ಲಿದ್ದ ಆಟಗಾರರಿಗೆ ಈ ಘಟನೆ ಮತ್ತಷ್ಟು ಆತಂಕ ಮೂಡಿಸಿತು.
ಗುಜರಾತ್ ತಂಡಕ್ಕೆ ಕಾಡಿದ ಸಾಲು ಸಾಲು ವಿಘ್ನಗಳು
ಇದಕ್ಕೂ ಮುನ್ನ, ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಗೆದ್ದ ನಂತರವೂ ಗುಜರಾತ್ ಟೈಟನ್ಸ್ ತಂಡವು ತೀವ್ರ ಬಿರುಗಾಳಿಯ ಕಾರಣದಿಂದಾಗಿ ಅಹಮದಾಬಾದ್ಗೆ ತಡವಾಗಿ ತಲುಪಿತ್ತು. ಶುಭ್ಮನ್ ಗಿಲ್ ನೇತೃತ್ವದ ತಂಡ ಫೈನಲ್ ಪಂದ್ಯಕ್ಕಾಗಿ ಶನಿವಾರ ತಡರಾತ್ರಿ 11 ಗಂಟೆಯ ಸುಮಾರಿಗೆ ಅಹಮದಾಬಾದ್ಗೆ ಬಂದಿಳಿದಿತ್ತು. ಅದಾದ ಮರುದಿನವೇ ಪಂದ್ಯದಲ್ಲಿ ಸೋತು, ಬಳಿಕ ಬಸ್ ಅಪಘಾತಕ್ಕೂ ಈಡಾಗುವಂತಾಗಿದ್ದು ತಂಡಕ್ಕೆ ದುರದೃಷ್ಟಕರ ರಾತ್ರಿಯಾಗಿ ಪರಿಣಮಿಸಿತು.



