ಬೆಂಗಳೂರು : ಮನ್ರೇಗಾ ಯೋಜನೆ ಹೆಸರು ಬದಲಾವಣೆ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, 12 ವರ್ಷಗಳಲ್ಲಿ ಬಡತನ ನಿರ್ಮೂಲನಾ ಅಭಿಯಾನ ವಾಸ್ತವಿಕತೆ. ಮೊದಲನೆಯದಾಗಿ ಮೋದಿ ಸರ್ಕಾರ ಬಡವರ ಕೆಲಸದ ಹಕ್ಕು ಕಿತ್ತು ಕೊಂಡಿದೆ. ಮನ್ರೇಗಾ ಯೋಜನೆಯಡಿ ಕೆಲಸ ಮಾಡುವ ಹಕ್ಕು ಕಸಿದುಕೊಳ್ಳುತ್ತಿದೆ. 2016ರಲ್ಲಿ ಉಜ್ವಲ ಯೋಜನೆಯಡಿ ಮಹಿಳೆಯರು ಸೌದೆ ಒಲೆ ಹೊಗೆಯಿಂದ ಮುಕ್ತರಾಗುತ್ತಾರೆ ಎಂದು ಹೇಳಿದ್ದರು. ಪ್ರತಿ ವರ್ಷ 12 ಸಬ್ಸಿಡಿ ಸಿಲಿಂಡರ್ ಎಂಬ ಭರವಸೆ ಇತ್ತು. ಕಳೆದ ವರ್ಷ 12 ರಿಂದ 9ಕ್ಕೆ ಇಳಿಸಲಾಗಿದೆ. ಈ ವರ್ಷ ಸಬ್ಸಿಡಿ ಸಿಲಿಂಡರ್ ಗಳ ಸಂಖ್ಯೆ 4ಕ್ಕೆ ಇಳಿದಿದೆ. ಅಂದರೆ 12ರ ಭರವಸೆ ಆದರೆ ಉದ್ದೇಶ 4 ಎಂದು ಟೀಕಿಸಿದರು.
ಎಲ್ ಪಿಜಿ ಸಿಲಿಂಡರ್ ಬೆಲೆ ಪದೇ ಪದೇ ಹೆಚ್ಚಿಸಲಾಗಿದೆ. ತಾಯಂದಿರು ಸಹೋದರಿಯರು ಸಿಲಿಂಡರ್ ಗಳನ್ನ ತ್ಯಜಿಸಿ ಒಲೆಗಳನ್ನ ಅಳವಡಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಬಡವರ ಕಣ್ಣೀರಿನ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಮೋದಿ ಸರ್ಕಾರ ಅಧಿಕಾರದ ಅಮಲಿನಲ್ಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದಿದ್ದಾರೆ.



