Wednesday, June 10, 2026
Google search engine

Homeರಾಜಕೀಯಆರ್‌ಎಸ್‌ಎಸ್‌ಗೆ ನೋಂದಣಿ ಭಯ ಏಕೆ? – ಪ್ರಿಯಾಂಕ್ ಖರ್ಗೆ ಪ್ರಶ್ನೆ

ಆರ್‌ಎಸ್‌ಎಸ್‌ಗೆ ನೋಂದಣಿ ಭಯ ಏಕೆ? – ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ಆರ್‌ಎಸ್‌ಎಸ್ ನೋಂದಣಿ ವಿಚಾರದಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ನ ಇತಿಹಾಸವೇ ಅವರಿಗೆ ಸರಿಯಾಗಿ ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ದಾರ್ ಪಟೇಲ್ ಹಾಗೂ ಜವಾಹರಲಾಲ್ ನೆಹರೂ ಅವರ ಅವಧಿಯಲ್ಲಿ ಆರ್‌ಎಸ್‌ಎಸ್‌ ಮೇಲೆ ನಿಷೇಧ ಹೇರಿದಾಗ ಸಂಘದ ನಾಯಕರು ಮನವಿ ಮಾಡಿಕೊಂಡಿದ್ದ ಉದಾಹರಣೆಗಳಿವೆ ಎಂದು ಹೇಳಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಘದ ಪ್ರಮುಖರು ಪತ್ರ ಬರೆದಿದ್ದ ವಿಚಾರವನ್ನೂ ಉಲ್ಲೇಖಿಸಿದ ಅವರು, “ನೋಂದಣಿ ಮಾಡಿಕೊಳ್ಳಿ ಎಂದರೆ ಯಾಕೆ ಭಯ? ಸಂವಿಧಾನ ಮತ್ತು ಕಾನೂನಿಗೆ ನಾವು ಒಳಪಡುವುದಿಲ್ಲ ಎಂದು ಹೇಳಲಿ. ನಾನು ಅವರ ಕಚೇರಿಗೆ ಬರುತ್ತೇನೆ ಅಥವಾ ಅವರು ನನ್ನ ಕಚೇರಿಗೆ ಬಂದು ದಾಖಲೆ ತೋರಿಸಲಿ” ಎಂದು ಸವಾಲು ಹಾಕಿದರು.

ದೇಶದಲ್ಲಿ ಸಣ್ಣ ವ್ಯಾಪಾರಿಯಿಂದ ಹಿಡಿದು ದೇವಸ್ಥಾನಗಳವರೆಗೆ ಎಲ್ಲರೂ ನೋಂದಣಿ ಮಾಡಿಕೊಳ್ಳಬೇಕು ಮತ್ತು ಲೆಕ್ಕಪತ್ರ ಸಲ್ಲಿಸಬೇಕು. ಆದರೆ ಆರ್‌ಎಸ್‌ಎಸ್ ಮಾತ್ರ ಇದರಿಂದ ಹೊರತಾಗಿರಲು ಸಾಧ್ಯವಿಲ್ಲ ಎಂದು ಖರ್ಗೆ ಅಭಿಪ್ರಾಯಪಟ್ಟರು. ದೇಣಿಗೆ ಮತ್ತು ಹಣಕಾಸಿನ ವ್ಯವಹಾರಗಳ ಕುರಿತು ಪಾರದರ್ಶಕತೆ ಇರಬೇಕೆಂದೂ ಹೇಳಿದರು.

ಪಬ್ ಹಾಗೂ ಬಾರ್‌ಗಳಲ್ಲಿ ಐಡಿ ಕಾರ್ಡ್ ಪರಿಶೀಲನೆ ಕಡ್ಡಾಯಗೊಳಿಸಿರುವ ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡ ಅವರು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯಲ್ಲಿ ತೊಡಗಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬಿಟ್‌ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲ್ಪಾಡ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಉಪ್ಪು ತಿಂದವರು ನೀರು ಕುಡಿಯಲೇಬೇಕು. ಎಸ್‌ಐಟಿ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದೆ. ಕಾನೂನು ತನ್ನ ಕೆಲಸ ಮಾಡುತ್ತಿದೆ” ಎಂದು ಹೇಳಿದರು.

RELATED ARTICLES
- Advertisment -
Google search engine

Most Popular