ಚೆನ್ನೈ : ಕನ್ಯಾಕುಮಾರಿಯಲ್ಲಿ ಪ್ರಸ್ತಾಪಿಸಲಾಗಿರುವ ಪರಮಾಣು ಖನಿಜ ಗಣಿಗಾರಿಕೆ ಯೋಜನೆಗೆ ಸಂಬಂಧಿಸಿದಂತೆ ಭೂಮಿ ಹಂಚಿಕೆ ಅವಧಿಯನ್ನು ವಿಸ್ತರಿಸಿರುವ ಟಿವಿಕೆ ಸರ್ಕಾರದ ನಿರ್ಧಾರವನ್ನು ಡಿಎಂಕೆ ಸಂಸದೆ ಕೆ. ಕನಿಮೊಳಿ ತೀವ್ರವಾಗಿ ಟೀಕಿಸಿದ್ದು, ಇದನ್ನು ದಕ್ಷಿಣ ಜಿಲ್ಲೆಯ ಜನತೆಗೆ ಮಾಡಿರುವ “ದೊಡ್ಡ ದ್ರೋಹ” ಎಂದು ಕರೆದಿದ್ದಾರೆ.
ಈ ಯೋಜನೆಯನ್ನು ರದ್ದುಗೊಳಿಸಬೇಕೆಂದು ಸ್ವತಃ ತಮ್ಮ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದ ಟಿವಿಕೆ ಸರ್ಕಾರ, ಇದೀಗ ಕೇಂದ್ರ ಸರ್ಕಾರದ ಈ ಪರಿಸರ ಸ್ನೇಹಿಯಲ್ಲದ ಯೋಜನೆಗೆ ಅನುಮತಿಗಳನ್ನು ಸುಗಮಗೊಳಿಸುತ್ತಿರುವುದು ಸರ್ಕಾರದ “ದ್ವಂದ್ವ ನಿಲುವು” ಎಂದು ಕನಿಮೊಳಿ ಕಿಡಿಕಾರಿದ್ದಾರೆ.
ಕೇಂದ್ರ ಗಣಿ ಸಚಿವಾಲಯವು 2021ರ ಜೂನ್ 11ರಂದು ಕನ್ಯಾಕುಮಾರಿಯ ಕಿಳ್ಳಿಯೂರು ತಾಲೂಕಿನಲ್ಲಿ 1,144 ಹೆಕ್ಟೇರ್ ಭೂಮಿಯನ್ನು ‘ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್’ (IREL) ಸಂಸ್ಥೆಗೆ ಪರಮಾಣು ಖನಿಜಗಳ ಗಣಿಗಾರಿಕೆಗಾಗಿ ಮೀಸಲಿಟ್ಟಿತ್ತು.
ಈ ಮೀಸಲಾತಿಯು ಜೂನ್ 10, 2026ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ, ಪರಿಸರ ಅನುಮತಿ (Environment Clearance) ಬಾಕಿ ಇರುವ ಕಾರಣ, ಐಆರ್ ಇಎಲ್ (IREL) ಸಂಸ್ಥೆಯು ರಾಜ್ಯ ಸರ್ಕಾರವನ್ನು ಕೋರಿತ್ತು. ಇದರನ್ವಯ, ಟಿವಿಕೆ ಸರ್ಕಾರವು ಗಣಿಗಾರಿಕೆಗಾಗಿ ಭೂಮಿ ಹಂಚಿಕೆಯ ಅವಧಿಯನ್ನು ಜೂನ್ 10, 2027ರವರೆಗೆ ಒಂದು ವರ್ಷ ವಿಸ್ತರಿಸಿ ಆದೇಶ ಹೊರಡಿಸಿದೆ.
ಈ ಬೆಳವಣಿಗೆಯು ದಕ್ಷಿಣ ಜಿಲ್ಲೆಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕನಿಮೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸಿಸ್)



