ಬೆಂಗಳೂರು : ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಬಹುದಿನಗಳಿಂದ ಬಾಕಿ ಉಳಿದಿದ್ದ ವೇತನ ಪರಿಷ್ಕರಣೆಗೆ ಸರ್ಕಾರ ಅನುಮೋದನೆ ನೀಡಿದ್ದು, ನೌಕರರ ಮೂಲ ವೇತನವನ್ನು ಶೇ.12.5ರಷ್ಟು ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ.
ಈ ಆದೇಶವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಸಿಬ್ಬಂದಿಗೆ ಅನ್ವಯವಾಗಲಿದೆ.
ಸರ್ಕಾರದ ಆದೇಶದಂತೆ, 2025ರ ಮಾರ್ಚ್ 31ರಂದು ನೌಕರರು ಪಡೆಯುತ್ತಿದ್ದ ಮೂಲ ವೇತನದ ಆಧಾರದ ಮೇಲೆ ಶೇ.12.5ರಷ್ಟು ಹೆಚ್ಚಳ ಮಾಡಲಾಗುತ್ತದೆ. ಇದರಿಂದ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಎಲ್ಲಾ ವರ್ಗದ ನೌಕರರಿಗೆ ಆರ್ಥಿಕವಾಗಿ ಲಾಭವಾಗಲಿದೆ.
ಪರಿಷ್ಕೃತ ವೇತನವನ್ನು 2026ರ ಜುಲೈ 1ರಿಂದ ಜಾರಿಗೆ ತರಲಾಗಿದ್ದು, ಈ ತಿಂಗಳ ವೇತನದಲ್ಲೇ ಹೆಚ್ಚುವರಿ ಮೊತ್ತ ಲಭ್ಯವಾಗಲಿದೆ. ಜೊತೆಗೆ, ವೇತನ ಪರಿಷ್ಕರಣೆಯನ್ನು 2025ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿರುವುದರಿಂದ ನೌಕರರಿಗೆ ಬಾಕಿ ವೇತನ (ಅರಿಯರ್ಸ್) ಕೂಡ ಪಾವತಿಸಲಾಗುತ್ತದೆ. ವೇತನ ಪರಿಷ್ಕರಣೆಗೆ ಸಾರಿಗೆ ನೌಕರರು ಕಳೆದ ಹಲವು ತಿಂಗಳುಗಳಿಂದ ಆಗ್ರಹಿಸುತ್ತಿದ್ದರು. ಹೆಚ್ಚುತ್ತಿರುವ ಜೀವನ ವೆಚ್ಚದ ನಡುವೆ ನೌಕರರ ಬೇಡಿಕೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ, ಈ ನಿರ್ಧಾರದ ಮೂಲಕ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ.



