ಬೆಂಗಳೂರು: ವಿಜಯದಶಮಿಯಂದು ಒಂದು ದಿನ ಆರ್ಎಸ್ಎಸ್ ಉಡುಪು ಧರಿಸುವುದನ್ನು ಬಿಟ್ಟರೆ, ಬಿಜೆಪಿ ನಾಯಕರ ಯಾವುದೇ ಮಗ ಪೂರ್ಣಕಾಲಿಕ ಆರ್ಎಸ್ಎಸ್ ಪ್ರಚಾರಕರಾಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ರಕ್ಷಣೆ, ಧರ್ಮ ರಕ್ಷಣೆ ಹಾಗೂ ಕೋಮು ಸಂಘರ್ಷಗಳಂತಹ ವಿಚಾರಗಳಲ್ಲಿ ಬಡವರ ಮತ್ತು ಸಾಮಾನ್ಯ ಕುಟುಂಬಗಳ ಯುವಕರನ್ನೇ ಮುನ್ನೆಲೆಗೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದರು. “ಒಬ್ಬ ಬಿಜೆಪಿ ನಾಯಕನ ಮಗ ಪೂರ್ಣಕಾಲಿಕ ಆರ್ಎಸ್ಎಸ್ ಪ್ರಚಾರಕರಾಗಿದ್ದರೆ ತೋರಿಸಿ” ಎಂದು ಸವಾಲು ಹಾಕಿದರು.
ಕೋಮು ಗಲಭೆಗಳಲ್ಲಿ ಸಾಮಾನ್ಯ ಯುವಕರೇ ಬಲಿಯಾಗುತ್ತಿದ್ದಾರೆ. ಆದರೆ ಬಿಜೆಪಿ ಅಥವಾ ಸಂಘ ಪರಿವಾರದ ನಾಯಕರ ಮಕ್ಕಳು ಇಂತಹ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಖರ್ಗೆ ಟೀಕಿಸಿದರು. ಪರೇಶ್ ಮೇಸ್ತಾ ಪ್ರಕರಣವನ್ನು ಉಲ್ಲೇಖಿಸಿದ ಅವರು, ಚುನಾವಣೆ ಬಳಿಕ ಅವರ ಕುಟುಂಬದ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ ಎಂದರು.
ಆರ್ಎಸ್ಎಸ್ ರೈತರ ಸಮಸ್ಯೆ, ನಿರುದ್ಯೋಗ ಅಥವಾ ಬೆಲೆ ಏರಿಕೆ ಕುರಿತು ಹೋರಾಟ ನಡೆಸಿಲ್ಲ. ಬದಲಾಗಿ ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಯುವಕರು ರಾಜಕೀಯ ಪ್ರಚೋದನೆಗೆ ಒಳಗಾಗದೆ ಉದ್ಯೋಗ ಮತ್ತು ಕುಟುಂಬದ ಭವಿಷ್ಯದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ ಖರ್ಗೆ, ತಮ್ಮ ವಿರುದ್ಧ ಬೆದರಿಕೆ ಹಾಕಿದ್ದ ಯುವಕನಿಗೂ ಸಂಘಟನೆಗಳು ಕಾನೂನು ನೆರವು ನೀಡಲಿಲ್ಲ ಎಂದು ಹೇಳಿದರು. ರಾಜಕೀಯ ಲಾಭಕ್ಕಾಗಿ ಯುವಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಆದಷ್ಟು ಬೇಗ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.



