ಬೆಂಗಳೂರು : ನಗರದ ಲಿಂಗಧೀರನಹಳ್ಳಿಯಲ್ಲಿ ನಿರ್ಮಾಣವಾಗಲಿರುವ ಸುಬ್ರಮಣ್ಯ ದೇವಾಲಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ರಾಜಗುರು ದ್ವಾರಕನಾಥ್, ಡಿ.ಕೆ.ಶಿವಕುಮಾರ್ ಅವರನ್ನು ದೂರದೃಷ್ಟಿಯ ರಾಜಕಾರಣಿ ಎಂದು ಬಣ್ಣಿಸಿ, ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಜನಸೇವೆ ಮಾಡಲಿ ಎಂದು ಹಾರೈಸಿದರು. ನಾನು ಸಾಮಾನ್ಯ ಮನುಷ್ಯ. ದೇವರ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ. ಹಲವು ವರ್ಷಗಳ ಹಿಂದೆಯೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದೆ. ಇಂದು ಅದು ನಿಜವಾಗಿದೆ. ಅವರು ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದಾರೆ. ಇನ್ನೂ ಹಲವು ವರ್ಷ ಜನಸೇವೆ ಮಾಡುವ ಅವಕಾಶ ಅವರಿಗೆ ಸಿಗಲಿ ಎಂದು ದ್ವಾರಕನಾಥ್ ಹೇಳಿದರು.
ಇದೇ ವೇಳೆ ಸುಬ್ರಮಣ್ಯ ದೇವರ ಅನುಗ್ರಹದಿಂದಲೇ ದೇವಾಲಯ ನಿರ್ಮಾಣಕ್ಕೆ ಈ ಜಾಗ ದೊರೆತಿದೆ ಎಂದು ಹೇಳಿದ ಅವರು, “ದೇವರಾಜ ಅರಸು ಅವರಂತೆ ಎಲ್ಲರನ್ನು ಒಳಗೊಂಡು ಆಡಳಿತ ನಡೆಸುವ ಗುಣ ಡಿ.ಕೆ.ಶಿವಕುಮಾರ್ ಅವರಲ್ಲಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, 35 ವರ್ಷಗಳ ಹಿಂದೆಯೇ ದ್ವಾರಕನಾಥ್ ಅವರು ನಾನು ಮಂತ್ರಿಯಾಗುತ್ತೇನೆ ಎಂದು ಹೇಳಿದ್ದರು. ಜೀವನದ ಹಲವು ಹಂತಗಳಲ್ಲಿ ಅವರು ಮಾರ್ಗದರ್ಶನ ನೀಡಿದ್ದಾರೆ. ಅವರ ಸಲಹೆ ಮತ್ತು ಆಶೀರ್ವಾದ ನನ್ನ ರಾಜಕೀಯ ಪಯಣದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಸ್ಮರಿಸಿದರು.
ಅನೇಕ ಬಾರಿ ಮಾಧ್ಯಮಗಳು ದ್ವಾರಕನಾಥ್ ಅವರನ್ನು ನನ್ನ ಬಗ್ಗೆ ಕೇಳಿ ಪ್ರಶ್ನಿಸಿದ್ದವು. ಟೀಕೆ, ಒತ್ತಡಗಳ ನಡುವೆಯೂ ಅವರು ತಮ್ಮ ನಂಬಿಕೆಯಿಂದ ಹಿಂದೆ ಸರಿಯಲಿಲ್ಲ. ದೇವರಾಜ ಅರಸು, ಎಸ್.ಎಂ.ಕೃಷ್ಣ, ವಿಲಾಸರಾವ್ ದೇಶಮುಖ್ ಸೇರಿದಂತೆ ಅನೇಕ ನಾಯಕರಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ. ಜ್ಞಾನ ಮತ್ತು ಅನುಭವದಲ್ಲಿ ಅವರು ಶ್ರೀಮಂತರು ಎಂದು ಮುಖ್ಯಮಂತ್ರಿ ಹೇಳಿದರು.



