ಬೆಂಗಳೂರು : ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಇಂದು 64ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯದ ಮೂಲಕ ಅರ್ಥಪೂರ್ಣವಾಗಿಸಲು ಮುಂದಾಗಿರುವ ಶಿವಣ್ಣ, ಕೇಕ್, ಹಾರ, ಶಾಲು ಅಥವಾ ಯಾವುದೇ ಉಡುಗೊರೆಗಳನ್ನು ತರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಅಭಿಮಾನಿಗಳ ಪ್ರೀತಿ ಮತ್ತು ಶುಭಾಶಯಗಳೇ ತಮ್ಮ ಪಾಲಿನ ದೊಡ್ಡ ಉಡುಗೊರೆ ಎಂದು ಹೇಳಿರುವ ಶಿವರಾಜ್ಕುಮಾರ್, ಮೈಸೂರಿನ ಶಕ್ತಿಧಾಮಕ್ಕೆ ಧನಸಹಾಯ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸುವಂತೆ ಮನವಿ ಮಾಡಿದ್ದರು. ಈ ವಿಶೇಷ ದಿನದಂದೇ ಶಿವರಾಜ್ಕುಮಾರ್ ಅವರ ಜೀವನದ ಹೋರಾಟ ಮತ್ತು ಚೇತರಿಕೆಯ ಪಯಣವನ್ನು ದಾಖಲಿಸುವ ‘ಸರ್ವೈವರ್’ ಹೆಸರಿನ ವಿಶೇಷ ಸಾಕ್ಷ್ಯಚಿತ್ರದ ಪ್ರೋಮೋ ಬಿಡುಗಡೆಯಾಗಿದ್ದು, ಅನಾರೋಗ್ಯದ ಸಂದರ್ಭದಲ್ಲಿ ಎದುರಿಸಿದ ಸವಾಲುಗಳು, ಆತ್ಮವಿಶ್ವಾಸದಿಂದ ಮರಳಿ ಸಿನಿಮಾ ಕ್ಷೇತ್ರಕ್ಕೆ ಬಂದ ಹಾದಿಯನ್ನು ಈ ಡಾಕ್ಯುಮೆಂಟರಿ ಒಳಗೊಂಡಿದೆ.
ಇನ್ನೂ ಗೀತಾ ಶಿವರಾಜ್ಕುಮಾರ್ ಅವರ ಗೀತಾ ಪಿಕ್ಚರ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಸಾಕ್ಷ್ಯಚಿತ್ರದ ಪ್ರೋಮೋದಲ್ಲಿ ಶಿವರಾಜ್ಕುಮಾರ್, ಮಧು ಬಂಗಾರಪ್ಪ ಹಾಗೂ ನಿವೇದಿತಾ ಶಿವರಾಜ್ಕುಮಾರ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್, ಸಾಯಿ ಕುಮಾರ್, ಕಮಲ್ ಹಾಸನ್, ನಾಗಾರ್ಜುನ, ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಸೇರಿದಂತೆ ಹಲವು ಗಣ್ಯರು ಶಿವಣ್ಣ ಅವರ ವ್ಯಕ್ತಿತ್ವ ಮತ್ತು ಹೋರಾಟದ ಬಗ್ಗೆ ಮಾತನಾಡಿದ್ದಾರೆ.
ಆಸ್ಪತ್ರೆಯಲ್ಲಿನ ಭಾವನಾತ್ಮಕ ಕ್ಷಣಗಳ ದೃಶ್ಯಗಳೂ ಪ್ರೋಮೋದಲ್ಲಿದ್ದು, ಅಭಿಮಾನಿಗಳ ಗಮನ ಸೆಳೆದಿವೆ. ಶೀಘ್ರದಲ್ಲೇ ಸಂಪೂರ್ಣ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದ್ದು, ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಶಿವರಾಜ್ಕುಮಾರ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಬಹುನಿರೀಕ್ಷಿತ ಸಿನಿಮಾಗಳು ಅವರ ಕೈಯಲ್ಲಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಅಭಿಮಾನಿಗಳ ಮೇಲಿನ ಪ್ರೀತಿ, ಸಮಾಜಸೇವೆಯ ಸಂದೇಶ ಹಾಗೂ ‘ಸರ್ವೈವರ್’ ಮೂಲಕ ತಮ್ಮ ಬದುಕಿನ ಹೊಸ ಅಧ್ಯಾಯವನ್ನು ಶಿವಣ್ಣ ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ.



