ಮೈಸೂರು: ವರದಿಗಳು ತಿಳಿಸುವ ವಿಷಯಕ್ಕಿಂತ ಹೆಚ್ಚು ಫೋಟೋಗಳು ತಿಳಿಸುತ್ತವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಛಾಯಾಗ್ರಹಣ ಇಲ್ಲದ ದಿನಗಳೇ ಇಲ್ಲ. ಅದರಲ್ಲೂ ರಾಜಕಾರಣಿಗಳಿಗೆ ಛಾಯಾಗ್ರಹಕರು ಇಲ್ಲದಿದ್ದರೆ ಕಾರ್ಯಕ್ರಮವೇ ನಡೆಯುವುದಿಲ್ಲ. ವ್ಯನ್ಯಜೀವಿ ಫೋಟೋ ತೆಗೆಯುವುದು ಒಂದು ದುಸ್ಸಾಹಸ. ವರದಿಗಳಿಗಿಂತಲೂ ಚಿತ್ರಗಳು ಬೇಗ ಗಮನ ಸೆಳೆಯುತ್ತವೆ. ಕೆಲ ಫೋಟೋ ಗ್ರಾಫರ್ಗಳ ಬಳಿ ಅತ್ಯುತ್ತಮ ವನ್ಯಜೀವಿ ಪೋಟೋಗಳಿವೆ ಅದನ್ನು ನನಗೆ ನೀಡಿದರೆ, ಅದನ್ನು ಕಾರ್ಯಕ್ರಮಗಳಲ್ಲಿ ಉಡುಗೊರೆ ನೀಡುತ್ತೇನೆ. ನಿಮ್ಮ ಜೊತೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಮಾತನಾಡಿ, ಛಾಯಾಗ್ರಹಣ ಬಹಳಷ್ಟು ಕಷ್ಟಕರ, ಸಾಹಸದ ಕೆಲಸವಾಗಿದೆ. ಈ ಹಿಂದೇ ಪತ್ರಿಕೆಗಳಿಗೆ ಫೋಟೋ ಕಳುಹಿಸಬೇಕಾದರೆ ಮೂರು ದಿನವಾಗುತ್ತಿತ್ತು. ಆದರೆ, ಇಂದು ತಂತ್ರಜ್ಞಾನದ ಸಹಾಯದಿಂದ ಕ್ಷಣಾಧದಲ್ಲಿ ಫೋಟೋ ಕಳುಹಿಸಬಹುದು ಎಂದರು. ಮೈಸೂರಿನ ಪತ್ರಕರ್ತರು ಬದ್ಧತೆಯೊಂದಿಗೆ ಕಾರ್ಯಕ್ಷಮತೆ ಉಳಿಸಿಕೊಂಡಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಘನತೆಯನ್ನು ಕಾಪಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇದೇ ವೇಳೆ ಹಿರಿಯ ಛಾಯಾಗ್ರಾಹಕ ಸುತ್ತೂರು ನಂಜುಂಡ ನಾಯಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅನುರಾಗ ಬಸವರಾಜು, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ ಮತ್ತು ಖಜಾಂಚಿ ನಾಗೇಶ್ ಪಾಣತ್ತಲೆ ಉಪಸ್ಥಿತರಿದ್ದರು.