ಮೈಸೂರು: ನಗರದ ಮೇಟಗಳ್ಳಿಯಲ್ಲಿರುವ ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗಾಗಿ ಆರಂಭಿಸಿರುವ ನೂತನ ಕೊಠಡಿಯನ್ನು ಸಂಸದ ಪ್ರತಾಪ ಸಿಂಹ ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ೨೦೧೭ರಲ್ಲಿ ಅನಂತ್ ಕುಮಾರ್ ಅವರ ನೇತೃತ್ವದಲ್ಲಿ ಆರಂಭವಾದ ಪಾಸ್ಪೋರ್ಟ್ ಸೇವಾ ಕೇಂದ್ರ ಜನರ ಕೆಲಸವನ್ನು ಸರಳವಾಗಿಸಿದೆ.
ಪಾಸ್ಪೋರ್ಟ್ ಮಾಡಲು ಬೆಂಗಳೂರಿಗೆ ತೆರಳಬೇಕು. ಅಲ್ಲಿನ ಹಿಂಸೆ ಅನುಭವಿಸಬೇಕು ಎಂಬ ಕಾರಣದಿಂದಾಗಿ ಅನೇಕರು ಆ ವಿಚಾರಕ್ಕೆ ತೆರಳುತ್ತಿರಲಿಲ್ಲ. ಆದರೆ, ಮೈಸೂರಿನಲ್ಲಿ ಸೇವಾ ಕೇಂದ್ರ ಆರಂಭವಾದ ಬಳಿಕ ೧೫,೩೮೨ ಪಾಸ್ಪೋರ್ಟ್ ನೋಂದಣಿಗಳಾಗಿವೆ. ಪರಿಶೀಲನೆಯಾದ ವಾರದೊಳಗೆ ಪಾಸ್ಪೋರ್ಟ್ ಕೈಸೇರುತ್ತಿದೆ ಎಂದು ತಿಳಿಸಿದರು. ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳುವವರ ಸಂಖ್ಯೆ ಹೆಚ್ಚುತ್ತಿದೆ. ಸೇವಾ ಕೇಂದ್ರದಲ್ಲಿ ದಿನವೊಂದಕ್ಕೆ ೧೨೫ ಜನರಿಗೆ ಅಧಿಕಾರಿಗಳ ಭೇಟಿಗೆ ಅವಕಾಶ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗಾಗಿ ಪ್ರತ್ಯೇಕ ಕೊಠಡಿಗೆ ಚಾಲನೆ ನೀಡಿದ್ದು, ಇದರಿಂದ ಕಚೇರಿಯ ಹೊರೆ ಕಡಿಮೆಯಾಗಲಿದೆ ಎಂದರು.
ಪಾಸ್ಪೋರ್ಟ್ ಸೇವಾ ಕೇಂದ್ರ ಅಂಚೆ ಕಚೇರಿಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಮೃಗಾಲಯದ ಬಳಿ ಇರುವ ಕಟ್ಟಡವೊಂದಕ್ಕೆ ಸೇವಾ ಕೇಂದ್ರವನ್ನು ಸ್ಥಳಾಂತರ ಮಾಡುವ ಯೋಚನೆಯಿದೆ. ಇದರಿಂದ ಜನ ಸಂಚಾರಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಅಧಿಕಾರಿಗಳಾದ ಎನ್.ಮೋಹನ್, ದರ್ಶನ್, ವಿನಯ್ ಇದ್ದರು.