ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಜನ್ ಧನ್ ದೇಶದಲ್ಲಿ ಡಿಜಿಟಲ್ ಕ್ರಾಂತಿಯನ್ನುಂಟು ಮಾಡಿದೆ ಎಂದು ಹಣಹಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. ೫೦ ಕೋಟಿಗೂ ಹೆಚ್ಚು ಜನರನ್ನು ಔಪಚಾರಿಕವಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಕರೆ ತರಲಾಗಿದೆ. ಈ ಖಾತೆಗಳಲ್ಲಿ ಸುಮಾರು ೨ ಲಕ್ಷ ಕೋಟಿ ಸಂಚಿತ ಠೇವಣಿ ಇಡಲಾಗಿದೆ ಎಂಬ ವಿಚಾರವನ್ನು ನಿರ್ಮಲಾ ಸೀತಾರಾಮನ್ ಬಹಿರಂಗ ಪಡಿಸಿದ್ದಾರೆ.
ಪಿಎಂಜೆಡಿವೈ ೯ನೇ ವಾರ್ಷಿಕೋತ್ಸವ: ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಉಪಕ್ರಮಗಳಲ್ಲಿ ಒಂದಾಗಿರುವ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ (ಪಿಎಂಜೆಡಿವೈ) ಒಂಬತ್ತನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಈ ಯೋಜನೆಯ ಅನ್ವಯ ಶೇ.೫೫.೫ ರಷ್ಟು ಬ್ಯಾಂಕ್ ಖಾತೆಗಳನ್ನು ಮಹಿಳೆಯರು ತೆರೆದಿದ್ದಾರೆ. ಗ್ರಾಮೀಣ, ಅರೆ-ನಗರ ಪ್ರದೇಶಗಳಲ್ಲಿ ಶೇ.೬೭ದಷ್ಟು ಖಾತೆಗಳನ್ನು ತೆರೆಯಲಾಗಿದೆ. ಯೋಜನೆಯಡಿ ಬ್ಯಾಂಕ್ ಖಾತೆಗಳ ಸಂಖ್ಯೆ ಮಾರ್ಚ್ ೨೦೧೫ರಲ್ಲಿ ೧೪.೭೨ ಕೋಟಿ ಇದ್ದದ್ದು, ಪ್ರಸ್ತುತ ೩.೪ ಪಟ್ಟು ಹೆಚ್ಚಾಗಿದೆ. ಆಗಸ್ಟ್ ೧೬, ೨೦೨೩ಕ್ಕೆ ೫೦.೦೯ ಕೋಟಿ ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಯೋಜನೆಯಡಿ ಶೂನ್ಯ ಠೇವಣಿ ಖಾತೆಗಳು, ಮಾರ್ಚ್ ೨೦೧೫ರಲ್ಲಿ ೫೮ ಪ್ರತಿಶತದಿಂದ ಆಗಸ್ಟ್ ೨೦೨೩ರ ಹೊತ್ತಿಗೆ ಒಟ್ಟು ಖಾತೆಗಳ ೮ ಪ್ರತಿಶತಕ್ಕೆ ಕಡಿಮೆಯಾಗಿದೆ. ೯ ವರ್ಷಗಳ ಪಿಎಂಜೆಡಿವೈ ನೇತೃತ್ವದ ಮಧ್ಯಸ್ಥಿಕೆ ಮತ್ತು ಡಿಜಿಟಲ್ ರೂಪಾಂತರವು ಆರ್ಥಿಕತೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಮಧ್ಯಸ್ಥಗಾರರು, ಬ್ಯಾಂಕ್ಗಳು, ವಿಮಾ ಕಂಪನಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಸಹಯೋಗದ ಪ್ರಯತ್ನಗಳೊಂದಿಗೆ, ಪಿಎಂಜೆಡಿವೈ ಒಂದು ಪ್ರಮುಖ ಉಪಕ್ರಮವಾಗಿ ಮಾರ್ಪಟ್ಟಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಮಾಹಿತಿ: ಜನ್ ಧನ್ ಆಧಾರ್ ಮೊಬೈಲ್ (ಜೆಎಎಂ) ಸೌಲಭ್ಯವು ಸಾಮಾನ್ಯ ಜನರ ಖಾತೆಗಳಿಗೆ ಸರ್ಕಾರಿ ಸವಲತ್ತುಗಳನ್ನು ಮನಬಂದಂತೆ ಯಶಸ್ವಿಯಾಗಿ ವರ್ಗಾಯಿಸಲು ಅನುವು ಮಾಡಿಕೊಟ್ಟಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಹೇಳಿದ್ದಾರೆ. “ಪಿಎಂಜೆಡಿವೈ ಖಾತೆಗಳು ನೇರ ಲಾಭ ವರ್ಗಾವಣೆಯು (ಡಿಬಿಟಿ) ಜನರ ಕೇಂದ್ರಿತ ಉಪಕ್ರಮಗಳ ಆಧಾರವಾಗಿದೆ. ಸಮಾಜದ ಎಲ್ಲ ವರ್ಗಗಳ, ವಿಶೇಷವಾಗಿ ಹಿಂದುಳಿದವರ ಅಂತರ್ಗತ ಬೆಳವಣಿಗೆಗೆ ಕೊಡುಗೆ ನೀಡಿವೆ” ಎಂದು ಅವರು ಹೇಳಿದರು.