ಹೊಸೂರು : ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣೆಗೂ ಮುನ್ನ ಜನಾಶೀರ್ವಾದ ಯಾತ್ರೆಯನ್ನು ಈ ಬಸವೇಶ್ವರ ದೇವಸ್ಥಾನದಿಂದ ಆರಂಭ ಮಾಡಲಾಯಿತು, ಜನರ ಆಶೀರ್ವಾದ ಮತ್ತು ದೇವರ ಕೃಪೆಯಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕು ಅರಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕಲ್ಯಾಣ ಬಸವೇಶ್ವರ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು ಈ ದೇವಾಲಯ ಇತಿಹಾಸ ಪೂರ್ವ ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದು ಇದರ ಜೀರ್ಣೋದ್ದಾರ ಮಾಡಲು ಶ್ರಮಿಸುತ್ತೇನೆ ಎಂದರು.
ಅರಕೆರೆ, ಗುಳುವಿನಅತ್ತಿಗುಪ್ಪೆ, ಕಾವಲುಹೊಸೂರು, ಗೇರದಡ, ಬಸವನಪುರ, ಭೇರ್ಯ, ಸಂಕನಹಳ್ಳಿ ಸೇರಿದಂತೆ ಇತರ ಗ್ರಾಮಸ್ಥರು ಟ್ರಸ್ಟ್ ಮಾಡಿಕೊಂಡು ಬಸವೇಶ್ವರ ದೇವಸ್ಥಾನದ ಜತೆಗೆ ಕಲ್ಯಾಣ ಬಸವೇಶ್ವರ ದೇವಾಲಯವನ್ನು ನೂತನವಾಗಿ ನಿರ್ಮಾಣ ಮಾಡಿದ್ದಾರೆ ಇದಕ್ಕಾಗಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಶಾಸಕರು ದೇವಾಲಯದ ಆವರಣವನ್ನು ಇನ್ನಷ್ಟು ಅಭಿವೃದ್ದಿ ಪಡಿಸಲು ಅನುದಾನ ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸರ್ಕಾರ ಅಧಿಕಾರಕ್ಕೆ ನೂರು ದಿನಗಳಾಗಿದ್ದು ಆಗಸ್ಟ್ ೩೦ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ಗಾಂಧಿಯವರು ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಮತ್ತು ಶಾಸಕರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ವತಿಯಿಂದ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದ ಶಾಸಕರು ಪಡಿತರ ಚೀಟಿಯ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ೨ ಸಾವಿರ ರೂಗಳನ್ನು ಸರ್ಕಾರ ಅಂದೇ ಜಮಾ ಮಾಡಲಿದೆ ಎಂದು ಹೇಳಿದ ಶಾಸಕರು ನಮ್ಮ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತದೆ ಎಂದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಭೇರ್ಯ ಪ್ರಕಾಶ್, ಕಾರ್ಯದರ್ಶೀ ಶಿವಣ್ಣೇಗೌಡ, ದೊಡ್ಡಮ್ಮ ಕರಿಯಮ್ಮ ದೇವಸ್ಥಾನದ ಅಧ್ಯಕ್ಷ ಕುಮಾರಸ್ವಾಮಿ, ಅರ್ಜುನಹಳ್ಳಿ ಗ್ರಾ.ಪಂ. ಅಧ್ಯಕ್ಷ ದಿಲೀಪ್, ಮಾಜಿ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಹರ್ಷವರ್ಧಿನಿ, ಅನಿಲ್ಕುಮಾರ್, ನಂದೀಶ್, ಸಿ.ಪಿ.ಮಂಜಪ್ಪ, ಕುಮಾರ್, ಶಿವರಾಜು, ಮಂಜುನಾಥ್, ಲಿಂಗಪ್ಪ, ಯೋಗಣ್ಣ ಮತ್ತಿತರರು ಹಾಜರಿದ್ದರು.