ಗದಗ: ಕಾವೇರಿ ವಿಚಾರದಲ್ಲಿ 10 ಕ್ಯುಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂಬುದು ನಮ್ಮ ಹೋರಾಟವಾಗಿತ್ತು. ನಮ್ಮ ನಿಲುವು ಸರಿಯಾಗಿದೆ ಅಂತಾ ನೀರು ನಿರ್ವಹಣಾ ಸಮಿತಿ ಒಪ್ಪಿಕೊಂಡಂತಿದೆ ಅಷ್ಟರ ಮಟ್ಟಿಗೆ ಸಮಾಧಾನವಿದೆ. ಆದರೆ 15 ದಿನ ನೀರು ಹರಿಸಬೇಕು ಎಂಬುದು ಕಠೋರ ನಿರ್ಣಯ ಎಂದು ನೀರು ನೀರ್ವಹಣಾ ಸಮಿತಿ ಸೂಚನೆ ಬಗ್ಗೆ ಸಚಿವ ಎಚ್ ಕೆ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಸಮಿತಿ ನಿರ್ಣಯ ಕಾವೇರಿ ರಿವರ್ ಆಥಾರಟಿ ಮುಂದೆ ಹೋಗುತ್ತೆ. ಅವರು 15 ದಿನ ನೀರು ಬಿಡುವ ನಿರ್ಧಾರ ಕಡಿತಗೊಳಿಸಲು ಪರಿಶೀಲನೆ ಮಾಡ್ಬೇಕು. ಆ ದಿಸೆಯಲ್ಲಿ ರಾಜ್ಯ ಸರ್ಕಾರ ಪ್ರಯತ್ನ ಮಾಡಲಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ
ಅವಧಿ ಪೂರ್ವ ಲೋಕಸಭೆ ಚುನಾವಣೆ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ವಿಚಾರವಾಗಿ ಮಾತನಾಡಿ, ನವೆಂಬರ್.. ಡಿಸೆಂಬರ್.. ಜನವರಿಯಲ್ಲಾದ್ರೂ ಎಲೆಕ್ಷನ್ ಮಾಡ್ಲಿ. ಕರ್ನಾಟಕ ಮತದಾರರ ಮನಸ್ಸು ನೋಡಿದ ಮೇಲೆ ಬಿಜೆಪಿ ಕೇಂದ್ರದಲ್ಲಿ ಸೋಲು ಅಂತಾ ಗೊತ್ತಾಗಿದೆ. ಚುನಾವಣೆಯನ್ನ ಯಾವಾಗ್ಲಾದ್ರೂ ಮಾಡ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ. ಆ ಕಾರಣಕ್ಕೆ ನಮ್ಮ ಪಕ್ಷದತ್ತ ನಾಯಕರು, ಕಾರ್ಯಕರ್ತರು ಧಾವಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮನಸ್ಸನ್ನು ಅರಿತವರು, ಸಮಾಜವಾದಿ ತತ್ವದಲ್ಲಿ ವಿಶ್ವಾಸವಿರುವವರು. ಜಾತ್ಯಾತೀತ ಮನೋಭಾವನೆ ಇರುವವರು, ಬಡವರ ಬಗ್ಗೆ ಕಳಕಳಿ ಇರುವವರನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ.
ನಮ್ಮನ್ನ ಯಾರು ಸಂಪರ್ಕ ಮಾಡಿದ್ದಾರೆ ಎಂಬುದು ಚರ್ಚೆಯ ವಿಷಯವಲ್ಲ. ಆದ್ರೆ ಬಹಳಷ್ಟು ನಾಯಕರು ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ. ಬಹಳಷ್ಟು ಜನ ಇದ್ದಾರೆ.. ನೀವು ಹೇಳುವುದಕ್ಕಿಂತ ಡಬಲ್ ಸಂಖ್ಯೆಯಲ್ಲಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂದರು.