ಗದಗ: ಕಳೆದ ವರ್ಷಕ್ಕೆ ಹೋಲಿಸಿದರೇ ಈ ನಾಲ್ಕೈದು ತಿಂಗಳಲ್ಲಿ ರಾಜ್ಯದಲ್ಲಿ ರೈತ ಆತ್ಮಹತ್ಯೆ ಕೇಸ್ ಕಂಡು ಬಂದಿಲ್ಲ. ಈಗಾಗಲೇ ಸರ್ಕಾರಗಳು ಬಡ ಕುಟುಂಬಗಳಿಗೆ ಬಲ ತುಂಬುವ ಕೆಲಸ ಮಾಡಿದೆ ಎಂದು ಗದಗನಲ್ಲಿ ಸಣ್ಣ ಕೈಗಾರಿಗೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ದವಸ ಧಾನ್ಯ ಕೊಡುವುದು.. ಗೃಹ ಲಕ್ಷ್ಮೀ, ಗೃಹಜ್ಯೋತಿ ಯೋಜನೆಯಿಂದಾಗಿ ಪ್ರಶ್ನೆ ಉದ್ಭವಿಸಲ್ಲ. ತೊಂದರೆಯಲ್ಲಿರುವವರು ಬಡ ಕುಟುಂಬಗಳು ಸರ್ಕಾರದ ಯೋಜನೆಯಿಂದ ತೃಪ್ತಿಕರ ಜೀವನ ನಡೆಸುತ್ತಿವೆ ಎಂದರು.
ಲೋಡ್ ಶೆಡ್ಡಿಂಗ್ ವಿಷಯವಾಗಿ ಮಾತನಾಡಿ, ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಇದೆ ಎಂದು ಕೇಳಿದ್ದೇನೆ. ಪೀಕ್ ಅವರ್ ನಲ್ಲಿ ಲೋಡ್ ಶೆಡ್ಡಿಂಗ್ ಪ್ರಾಬ್ಲಂ ಇದೆ. 2-3 ದಿನದಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎಂದರು.
ಡ್ಯಾಂ ಭರ್ತಿಯಾಗಿವೆ. ಜಲ ವಿದ್ಯುತ್ ಸ್ಥಾವರಗಳೂ ಕೆಲಸ ಮಾಡುತ್ತವೆ. ಕೋಲ್ ಬಂದಿವೆ. ರಾಯಚೂರಿನಲ್ಲಿ ನಾಲ್ಕು ಘಟಕ ಕಾರ್ಯಾರಂಭ ಮಾಡಿವೆ ಎಂದು ತಿಳಿಸಿದರು.
ಗ್ಯಾರಂಟಿ ವಿರುದ್ಧ ಬಿಜೆಪಿ ಹೋರಾಟ ಕುರಿತು ಮಾತನಾಡಿ, ಜನರಿಗೆ ಸವಲತ್ತು ಕೊಡಬಾರದಾ ಎಂದು ಪ್ರಶ್ನಿಸಿ, ಯೋಜನೆಗಳು ಜನರಿಗೆ ಉಪಯೋಗ ಆಗಿವೆಯಲ್ಲ. ಸಾಮಾನ್ಯ ಜನರಿಗೆ ಹೆಚ್ಚು ಶಕ್ತಿ ತುಂಬುವ ಕೆಲಸವಾಗಿದೆ. ಬಿಜೆಪಿ ಗ್ಯಾರಂಟಿ ಕೊಟ್ಟಿದ್ದಕ್ಕೆ ಸ್ಟ್ರೈಕ್ ಮಾಡ್ತರಾ.. ಕೊಡಬೇಡಿ ಅಂತಾ ಪ್ರತಿಭಟಸ್ತಾರಾ..? ಅವರಹಾಗೇ ನಾವು ಸರ್ಕಾರ ನಡೆಸಬೇಕಾ.. ನಮ್ಮದು ಜನಪರ ಸರ್ಕಾರ ಎಂದು ಹೇಳಿದರು.
ಬಿಜೆಪಿ ಅವರಿಗೆ 112 ಸೀಟ್ ಕೊಟ್ಟು ಸರ್ಕಾರ ರಚನೆಯ ಅವಕಾಶ ಕೊಟ್ಟಿಲ್ಲ. ವಾಮಮಾರ್ಗದಿಂದ ಹಣ ವೆಚ್ಚ ಮಾಡಿ ಸರ್ಕಾರ ರಚಿಸಿದ್ರು. ಈಗ ಬೆಲೆ ಏರಿಕೆಯಿಂದ ಜನರಿಗೆ ಸಮಸ್ಯೆಯಾಗಿದೆ. ಗ್ಯಾರಂಟಿ ಕೊಡುವ ಮೂಲಕ ಬಡವರ ಬದುಕಿನಲ್ಲಿ ಶಾಂತಿಬತರುವ ಕೆಲಸ ಮಾಡಿದ್ದೇವೆ. ಇವುಗಳನ್ನ ಕೊಡೋದ್ರಿಂದ ಸ್ಟ್ರೈಕ್ ಮಾಡ್ತಾರಾ, ಮಾಡ್ಲಿ. ಜನರಿಗೆ ಕೊಟ್ಟ ಮಾತು ಈಡೇರಿಸುತ್ತೇವೆ. ಸಣ್ಣಪುಟ್ಟ ತೊಂದ್ರೆಯಾಗಿದ್ರೆ ಹೇಳಲಿ ಸರಿ ಮಾಡೋಣ ಎಂದರು.
ಬಿಜೆಪಿಗೆ ಭಯ. ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗಿಲ್ಲ. ಅವರ ಪಕ್ಷದಲ್ಲಿ ಎಷ್ಟೋ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದಲ್ಲಿದ್ದಾಗ ಜನರಿಗೆ ಏನು ಮಾಡ್ಲಿಲ್ಲ ಅಂತಾ ಅವರ ಮಾಜಿ ಶಾಸಕರೇ ಹೇಳ್ತಿದ್ದಾರೆ ಎಂದು ಹರಿಹಾಯ್ದರು.
ಬರಘೋಷಣೆ ಬಗ್ಗೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ವಿಚಾರ ಮಾಡಿ ವರದಿ ತರೆಸಿಕೊಂಡಿದ್ದಾರೆ. ದೇವರ ದಯೆಯಿಂದ 2-3 ದಿನದಿಂದ ಉತ್ತಮ ಮಳೆಯಾಗ್ತಿದೆ. ಏಳನೇ ತಾರೀಕು ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ. ಅಲ್ಲಿ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.