ಮೈಸೂರು: ಶೈಕ್ಷಣಿಕವಾಗಿ ದೇಶ ಕಟ್ಟುವಲ್ಲಿ ಶಿಕ್ಷಕರಷ್ಟೇ, ವಿದ್ಯಾರ್ಥಿಗಳಷ್ಟೇ, ಶಿಕ್ಷಣ ಸಂಸ್ಥೆಗಳು ಸಹ ಬಹು ಮುಖ್ಯವಾಗಿದ್ದು ದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು ಅವುಗಳಲ್ಲಿ ಅರಮನೆಗಳ ನಗರಿಯಷ್ಟೇ ಶಿಕ್ಷಣ ಕಾಶಿ ಎಂದೂ ಹೆಸರಾಗಿರುವ ಮೈಸೂರಿನ ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯೂ ಒಂದಾಗಿದೆ ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.
ನಗರದ ಕೃಷ್ಣಮೂರ್ತಿ ಪುರಂ ನಲ್ಲಿರುವ ಪ್ರತಿಷ್ಠಿತ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿನಡೆದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಕೇಂದ್ರ ಬಿಂದುವಾಗಿರುವ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರಂತೆ ಶಿಕ್ಷಣ ಪ್ರೇಮಿಯಾಗಿದ್ದು ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಹತ್ತು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣಕರ್ತರಾಗಿ ತಾತಯ್ಯ ಎಂದೇ ಖ್ಯಾತರಾಗಿದ್ದ ವೃದ್ಧ ಪಿತಾಮಹ ಎಂ. ವೆಂಕಟ ಕೃಷ್ಣಯ್ಯನವರ ಜನ್ಮದಿನವೂ ಶಿಕ್ಷಕರ ದಿನವೇ ಆಗಿದ್ದು, ಇವರನ್ನೂ ಕೂಡ ನಾಡು ಸ್ಮರಿಸಬೇಕೆಂದೂ,ಇಲ್ಲಿ ಕಲಿತು ಮಹತ್ಸಾಧಕರಾಗಿರುವವರ ಸಾಧನೆಯ ಬದುಕನ್ನು ವಿದ್ಯಾರ್ಥಿಗಳು ಅರಿಯಬೇಕೆಂದರು. ಗುರು ಎಂಬೆರಡಕ್ಷರ ಅತ್ಯಂತ ಶಕ್ತಿಶಾಲಿಯಾದದ್ದು.ಒಂದುರೀತಿ ಗಾಯತ್ರಿ ಮಂತ್ರವಿದ್ದಂತೆ. ಗುರು ಎಲ್ಲೆಡೆ ಇರುವ ಸರ್ವಾಂತ ರ್ಯಾಮಿ.ಭೂಮಿ, ಆಗಸ, ವಾಯು, ಅಗ್ನಿ, ನೀರು ಸೇರಿದಂತೆ ಇಡೀ ಪ್ರಕೃತಿಯಲ್ಲಿ ಗುರುವುಂಟು. ಭೂಮಿಯಿಂದ ಮತ್ತು ಪ್ರಕೃತಿಯಿಂದ ನಾವು ಕಲಿಯಬೇಕಾದ್ದು ಬೇಕಾದಷ್ಟಿದೆ. ಆದ್ದರಿಂದ ನಿತ್ಯ ಕಲಿಕೆಯೇ ಜೀವನ. ಜ್ಞಾನವೇ ಬೆಳಕು. ಇಂಥಾ ಬೆಳಕು ಎಲ್ಲಿಂದ ಬಂದರೂ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದೆಲ್ಲವೂ ಗುರು ಹಿರಿಯರಿಂದ ಬರುವಂತಾದ್ದು. ಇದೆಲ್ಲವನ್ನೂ ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಸುಂದರ ಭವಿಷ್ಯ ರೂಪಿಸಿಕೊಳ್ಳಬಹುದು ಎಂದ ಅವರು ವಿಶೇಷವಾಗಿ ನಾವು ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ರಾಧಾಕಷ್ಣನ್ ಜೊತೆಯಲ್ಲಿ ಮಹಿಳೆಯರಿಗೆ ಶಿಕ್ಷಣದ ದಾರಿ ತೋರಿದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರನ್ನು ನೆನೆಯಲೇ ಬೇಕು ಎಂದು ಹೇಳಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ್ ಅವರು ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಕ್ಯಾಪ್ಟನ್ ಶ್ರೀನಿವಾಸ ರಾಘವಾಚಾರ್ ಅವರು ಗುರುಭಕ್ತಿ, ಗುರುಶಕ್ತಿ ಮತ್ತು ಶಿಕ್ಷಣದ ಮಹತ್ವ ಹಾಗೂ ಕಲಿಕೆಯ ಮಾರ್ಗದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತಂತೆ ಮಾತನಾಡಿ ಕಿವಿಮಾತು ಹೇಳಿದರು. ಇದೇ ಇದೇ ಸಂದರ್ಭದಲ್ಲಿ ಸಾಹಿತಿ ಬನ್ನೂರು ಕೆ ರಾಜು ಅವರನ್ನು ಶಾಲು ಹೊದಿಸಿ ಫಲಪುಷ್ಪ ತಾಂಬೂಲಗಳ ಸಹಿತ ಗೌರವಿಸಲಾಯಿತು.ಕಾಲೇಜಿನ ಪ್ರಾಂಶುಪಾಲ ಸಿ. ಕೆ.ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ವೆಂಕಟರಾಮ್ ಭಟ್, ಮನೋಜ್ ಕುಮಾರ್, ಎಚ್. ಆರ್. ಪರಮೇಶ್ವರ್, ಡಾ.ಉಮೇಶ್, ಸಯ್ಯದ್ ಅಹಮದ್, ರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಪ್ರವೀಣ್ ಕುಮಾರ್, ಎಚ್. ಆರ್. ಬಾಲಸುಬ್ರಹ್ಮಣ್ಯ ಶಿಲ್ಪಾ ಮನೋಹರ್, ನವೀನ್ ಕುಮಾರ್,ಚಂದ್ರಶೇಖರ್, ಲೋಕೇಶ್, ಪಿ.ಶಿವಶಂಕರ್, ಡಾ.ಪೂಜಾ, ಎಂ.ಆರ್.ರಶ್ಮಿ , ಪಿ. ದಿವ್ಯಾ, ಎಂ.ಎಸ್.ಲಾವಣ್ಯ, ಕಾವ್ಯಶ್ರೀ ಅರ್.ರಾವ್, ಕವಿತಾ, ಹರಿಣಿ ಜಗದೀಶ್,ಕುಸುಮಾ, ಎಂ.ಎನ್.ಮಧುರಾ, ವಿಂದ್ಯಾ ವಿ.ಪ್ರಸಾದ್, ಪಿ.ಕವನಾ, ಹೆಚ್.ಬಿ. ಶಶಿಕಲಾ, ಇನ್ನಿತರರು ಭಾಗವಹಿಸಿದ್ದರು.ಪ್ರಾರಂಭದಲ್ಲಿ ವಿದ್ಯಾರ್ಥಿಗಳಾದ ನೀರಜ್ ಶರ್ಮಾ ಪ್ರಾರ್ಥನೆ ಮಾಡಿದರೆ ಸಂಜನಾ ಸ್ವಾಗತಿಸಿದರು. ಗಣ್ಯರನ್ನು ಪೂಜಾ ಪರಿಚಯ ಮಾಡಿ ಕೊಟ್ಟರೆ ಧನವಂತ್ ವಂದನಾರ್ಪಣೆ ಮಾಡಿದರು. ಇಡೀ ಕಾರ್ಯ್ರಮವನ್ನು ಸಿ.ಕೆ.ಮಂಜುನಾಥ ಅಚ್ಚುಕಟ್ಟಾಗಿ ನಿರೂಪಿಸಿದರು.