ದಾವಣಗೆರೆ: ಕೇಂದ್ರ ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಪ್ರಚುರ ಪಡಿಸುವುದರಿಂದ ಜನಸಾಮಾನ್ಯರಿಗೆ ಮತ್ತು ಬಡಜನರಿಗೆ ಅನುಕೂಲವಾಗಲಿದೆ ಎಂದು ದಾವಣಗೆರೆ ಸಂಸದರಾದ ಡಾ. ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ಗುರುವಾರ ಭಾರತ ಸರ್ಕಾರದ ವಾರ್ತಾ ಶಾಖೆ(ಪಿ.ಐ.ಬಿ) ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ದಾವಣಗೆರೆ ಇವರ ಸಹಯೋಗದೊಂದಿಗೆ ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತಂತೆ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ ವಾರ್ತಾಲಾಪ ಕಾರ್ಯಾಗಾರ ಮತ್ತು ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರು, ಬಡವರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಜನಧನ್, ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಭಿಮಾ, ಜಲಜೀವನ್ ಮಿಷನ್, ಆಯುಷ್ಮಾನ್ ಭಾರತ್, ಸ್ವಧಾರ, ಉಜ್ವಲ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನ್ಧನ್ ಯೋಜನೆಯ ಮೂಲಕ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಶೂನ್ಯ ಠೇವಣಿಯಲ್ಲಿ ಆರಂಭಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದರಿಂದ ಅನೇಕ ಬಡವರಿಗೆ ಅನುಕೂಲವಾಗಿದೆ. ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಿಂದ ಅನೇಕ ಬಡವರಿಗೆ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳುವಲ್ಲಿ ಅನುಕೂಲವಾಗಿದೆ. ಮತ್ತು ರೈತರಿಗೆ ಫಸಲ್ಬಿಮಾ ಯೋಜನೆಯಿಂದಲೂ ಸಾಕಷ್ಟು ಅನುಕೂಲವಾಗಿದೆ. ಈ ಯೋಜನೆಗಳು ಗ್ರಾಮೀಣ ಜನರಿಗೆ ತಲುಪುವಂತೆ ಮಾಡಲು ಹೆಚ್ಚು ಪ್ರಚಾರ ಮಾಡುವುದರಿಂದ ಬಡವರಿಗೆ ಅನುಕೂಲವಾಗಲಿದೆ. ಮಾಧ್ಯಮಗಳು ಸಹ ಗ್ರಾಮೀಣ ಭಾಗದ ಜನರಿಗೆ ಮಾಹಿತಿ ನೀಡುವ ಮೂಲಕ ಅನುಕೂಲ ಕಲ್ಪಿಸಬೇಕಾಗಿದೆ.
ಆಧುನಿಕ ದಿನಮಾನಗಳಲ್ಲಿ ಕೆಲ ಮಾಧ್ಯಮ ಕ್ಷೇತ್ರವನ್ನು ಕೇವಲ ಉದ್ಯಮಗಳಾಗಿ ಪರಿವರ್ತಿಸಿಕೊಂಡಿದ್ದಾರೆ. ಮಾಧ್ಯಮ ಕ್ಷೇತ್ರವು ಬೆಲೆ ಕಟ್ಟಲಾಗದ ಆಸ್ತಿಯಾಗಿದ್ದು, ಅಂತಹ ಗೌರವ, ಘನತೆ ಮಾಧ್ಯಮದವರಿಗಿದೆ, ಸಮಾಜದಲ್ಲಿ ಯಾರೇ ತಪ್ಪು ಮಾಡಿದರೂ ಅದನ್ನು ಸರಿಪಡಿಸುವ ಕೆಲಸವನ್ನು ಮಾಧ್ಯಮಗಳ ಮುಖಾಂತರ ಮಾಡಬೇಕು, ತಪ್ಪನ್ನು ತಿದ್ದುವುದು ಒಳ್ಳೆಯ ಆರೋಗ್ಯಕರ ಬೆಳವಣಿಗೆ ಎಂದು ಮಾಧ್ಯಮವನ್ನು ಬಣ್ಣಿಸಿದರು.
ವರದಿಗಾರರು ಕೇವಲ ನಗರಕ್ಕೆ ಸೀಮಿತವಾಗಿರದೆ, ಗ್ರಾಮೀಣ ಪ್ರದೇಶಗಳಲ್ಲಿನ ಕುಂದು ಕೊರತೆಗಳನ್ನು ವರದಿ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು ಎಂದರು.
ಉಪವಿಭಾಗಾಧಿಕಾರಿ ಎನ್.ದುರ್ಗಶ್ರೀ, ಕೇಂದ್ರ ವಾರ್ತಾ ಶಾಖೆ ಬೆಂಗಳೂರಿನ ಉಪ ನಿರ್ದೇಶಕ ಎಸ್ ಪ್ರಕಾಶ್, ಬೆಂಗಳೂರು ಮಾಧ್ಯಮ ಮತ್ತು ಸಂವಾಹನಾಧಿಕಾರಿ ಪಿ.ಜಿ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಜಿಲ್ಲಾ ವಾರ್ತಾಧಿಕಾರಿ ಬಿ. ಧನಂಜಯಪ್ಪ, ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ್ ಉಪಸ್ಥಿತರಿದ್ದರು. ಕೇಂದ್ರ ಕ್ಷೇತ್ರ ಪ್ರಚಾರಾಧಿಕಾರಿ ಲಕ್ಷ್ಮಿಕಾಂತ್ ಸ್ವಾಗತಿಸಿ ನಿರೂಪಿಸಿದರು.