ಪಿರಿಯಾಪಟ್ಟಣ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಗುಂಡು ತೋಪು, ಗ್ರಾಮ ಠಾಣಾ, ಸರ್ಕಾರಿ ಗೋಮಾಳ ಗೋಳನ್ನು ಸರ್ಕಾರದ ವಶಕ್ಕೆ ಪಡೆಯಿರಿ ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಚೌತಿ, ತಿಮಕಾಪುರ, ಮುತ್ತೂರು, ಆಯರಬೀಡು, ದೊಡ್ಡ ಹೊನ್ನೂರು ಗ್ರಾಮಗಳಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನ, ಸರ್ಕಾರಿ ಗೋಮಾಳ, ಸೇರಿದಂತೆ ಇನ್ನಿತರ ಸರ್ಕಾರಿ ಜಾಗಗಳನ್ನು ಕಬಳಿಸಿರುವ ಘಟನೆಗಳು ನಡೆದಿದ್ದು, ಇವುಗಳನ್ನು ಸರ್ವೆ ಕಾರ್ಯ ನಡೆಸಿ ಸರ್ಕಾರದ ವಶಕ್ಕೆ ಪಡೆದು ಸಾರ್ವಜನಿಕರಿಗೆ ನಿವೇಶನ ನೀಡಲು ಕಾಯ್ದಿರಿಸಬೇಕು ಎಂದು ತಹಶೀಲ್ದಾರ್ ಕುಂಞಿ ಅಹಮದ್ ಗೆ ಸೂಚನೆ ನೀಡಿದರು. ತಾಲ್ಲೂಕಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಎಲ್ಲ ವರ್ಗದ ಜನರು ನನಗೆ ಬಹುಮತ ನೀಡಿ ಆಶೀರ್ವಾದ ಮಾಡಿದ್ದು, ಅವರ ಋಣ ನನ್ನ ಮೇಲೆ ಇದೆ ನಾನು ಪ್ರಾಮಾಣಿಕವಾಗಿ ಪ್ರತಿ ಹಳ್ಳಿಗೂ ಭೇಟಿ ನೀಡಿ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ವಸತಿ ಹಂಚಿಕೆ, ಮನೆಗಳ ನಿರ್ಮಾಣ ಸೇರಿದಂತೆ ಇನ್ನೂ ಅಗತ್ಯ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಅಧಿಕಾರಿಗಳು ಪ್ರತಿ ಗ್ರಾಮದಲ್ಲೂ ಸ್ಮಶಾನ ನಿರ್ಮಾಣ ಮಾಡಲು ಕಂದಾಯ ಇಲಾಖೆಯವರು ಜಾಗ ಗುರುತಿಸಬೇಕು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಕೊರತೆಯಿಂದ ರೈತರ ಜಮೀನುಗಳಿಗೆ ಹಾರಂಗಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ವಾರಕ್ಕೊಂದು ಬಾರಿಯಾದರೂ ನೀರು ಹಾಯಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬೈಲುಕುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿ ಬೈಲಕುಪ್ಪೆ, ದೊಡ್ಡ ಹರವೆ, ಚಿಕ್ಕ ಹೊನ್ನೂರು, ಮಂಚದೇವನಹಳ್ಳಿ, ಗ್ರಾಮಗಳಿಗೆ ಭೇಟಿ ನೀಡಿ ಜನರ ಕುಂದು ಕೊರತೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕುಂಜಿ ಅಹಮದ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಸಾರ್ ಅಹಮದ್, ಉಪಾಧ್ಯಕ್ಷೆ ಗೀತಾ ಸುಬ್ರಹ್ಮಣ್ಯ, ಸದಸ್ಯರಾದ ದಾಹೂದ್, ಸುರೇಶ್ , ರಘು, ನವೀನ್, ಹರೀಶ, ಸುಮಾ, ರಾಜು , ರಘು, ಮುಖಂಡರಾದ ಟಿ.ಡಿ ಸ್ವಾಮಿ, ರಹಮತ್ ಜಾನ್ ಬಾಬು, ಅಸ್ಲಾಂ ಪಾಷಾ, ಈಶ್ವರ, ಮಣಿ ಅಮ್ಮ, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳಾದ ಸೋಮಯ್ಯ , ಪ್ರಸಾದ್, ಮಾದೇಶ್ ,ಪ್ರಸಾದ್, ಧರ್ಮರಾಜು, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಸಾರ್ವಜನಿಕರು ಹಾಜರಿದ್ದರು.