ಹೊಸದಿಲ್ಲಿ: ಇಂದಿನಿಂದ ೫ ದಿನಗಳ ಕಾಲ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ನಡೆಯಲಿದೆ. ಕೇಂದ್ರ ಸರ್ಕಾರ ಯಾವ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎನ್ನುವ ಊಹಾಪೋಹಗಳ ಮಧ್ಯೆಯೇ ಲೋಕಸಭಾ ಅಧಿವೇಶನ ಶುರುವಾಗಿದೆ. ಅಧಿವೇಶನದಲ್ಲಿ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಒಟ್ಟು ಎಂಟು ಮಸೂದೆಗಳನ್ನು ಪಟ್ಟಿ ಮಾಡಲಾಗಿದೆ. ಇಂದು ಮೊದಲ ದಿನ ಉಭಯ ಸದನಗಳ ಕಲಾಪ ಹಳೆಯ ಸಂಸತಿನ ಕಟ್ಟಡದಲ್ಲಿ ಮೊದಲಿನಂತೆಯೇ ಆರಂಭಗೊಂಡಿದೆ.
ಎರಡನೇ ದಿನವಾದ ಸೆ. ೧೯ ರಂದು ಗಣೇಶ ಚತರ್ಥಿಯ ಸಂದರ್ಭ ಪೂಜೆ ಸಲ್ಲಿಸಿದ ಬಳಿಕ ಹೊಸ ಸಂಸತ್ತಿನ ಕಟ್ಟಡದಲ್ಲಿ ಕಲಾಪಗಳು ನಡೆಯಲಿವೆ. ಲೋಕಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಸಾಧ್ಯತೆಯಿದ್ದು, ೭೫ ವರ್ಷಗಳ ಸಂಸದೀಯ ಪಯಣದ ಕುರಿತು ಚರ್ಚೆ ನಡೆಯಲಿದೆ. ವಿಶೇಷ ಅಧಿವೇಶನದಲ್ಲಿ ಒಂಬತ್ತು ವಿಷಯಗಳ ಕುರಿತು ಚರ್ಚೆಗೆ ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅದಕ್ಕೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಬಿಜೆಪಿಯ ಲೋಕಸಭಾ ಸಂಸದರಾದ ಸುನೀಲ್ ಕುಮಾರ್ ಸಿಂಗ್ ಹಾಗೂ ಗಣೇಶ್ ಸಿಂಗ್ ಅವರು ವಿಶೇಷಾಧಿಕಾರಿಗಳ ಸಮಿತಿಯ ಆರನೇ ವರದಿಯನ್ನು ಇಂದು ಮಂಡಿಸಲಿದ್ದಾರೆ.