ಶಿವಮೊಗ್ಗ: ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತು ಕಾವೇರಿ ನೀರನ್ನು ಕುಡಿಯುವದಕ್ಕಾಗಿ ಉಳಿಸಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರನ್ನು ತಮಿಳುನಾಡಿಗೆ ಮೊದಲು ಕೊಟ್ಟು, ಕಾಂಗ್ರೆಸ್ ಮುಖಂಡರು ಈಗ ಸಂಸತ್ ಸದಸ್ಯರ ಸಭೆ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ ಅನುಭವಿಸುತ್ತಿರಲಿಲ್ಲ. ಈಗ ಕೈ ಮೀರಿದ ಪರಿಸ್ಥಿತಿಯಲ್ಲಿ ಕೇಂದ್ರದ ಜಲಸಂಪನ್ಮೂಲ ಸಚಿವ ಶೇಖಾವತ್ ಅವರನ್ನು ಭೇಟಿ ಮಾಡಲು ಬಂದಿದ್ದು, ಈ ಮೂಲಕ ಕಾಂಗ್ರೆಸ್ ದ್ವಂದ್ವ ನೀತಿ ಅನುರಿಸುತ್ತಿದೆ. ಕಾವೇರಿ ವಿವಾದ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದ್ರೆ, ಸರ್ವ ಪಕ್ಷ ನಿಯೋಗ ಕರೆ ತಂದಿದ್ದು ಇರಬಹುದು ಇವೆಲ್ಲ ತಡವಾಗಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ೪೫ ಟಿಎಂಸಿ ಕುಡಿಯುವ ನೀರು ಬೆಂಗಳೂರಿಗೆ ಬೇಕಾಗುತ್ತದೆ. ಕೃಷಿಗೆ ಬೇಕಾಗುತ್ತದೆ. ಈಗಲಾದರೂ ಸಹ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ. ಮೋದಿ ಅವರನ್ನು ಟೀಕಿಸುವ ಸಿದ್ದರಾಮಯ್ಯನವರು ತಮಿಳುನಾಡು ಸಿಎಂ ಬಳಿ ಹೋಗಿ ನಮ್ಮ ಪರಿಸ್ಥಿತಿಯನ್ನು ವಿವರಿಸಿ ನೀರು ಬಿಡಲ್ಲ ಎಂದು ತಿಳಿಸಬೇಕಿದೆ ಎಂದು ಹೇಳಿದರು.
ನಾರಿ ಶಕ್ತಿ ವಿಧೇಯಕದ ಮೂಲಕ ಶಾಸನ ಸಭೆಗಳಲ್ಲಿ ಕನಿಷ್ಠ ೩ನೇ ಒಂದು ಭಾಗದಷ್ಟು ಪಾಲು ಮಹಿಳೆಯರಿಗೆ ಸಿಗಲೇಬೇಕು ಎಂಬ ಐತಿಹಾಸಿಕ ನಿರ್ಣಯಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸತ್ ಸದಸ್ಯರೆಲ್ಲರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದರು.