ತಿರುವನಂತಪುರಂ: ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇಂದು (ಶನಿವಾರ) ಭಾರೀ ಮಳೆಯ ಹಿನ್ನೆಲೆಯಲ್ಲಿ ಕೇರಳದ ಅಲಪ್ಪುಳ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ೧೦ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹಳದಿ ಅಲರ್ಟ್ ಘೋಷಿಸಿದೆ.
ಜೂನ್ ತಿಂಗಳಿನಲ್ಲಿ ಕೇರಳದಲ್ಲಿ ಶೇ.೬೦ರಷ್ಟು ಕಡಿಮೆ ಮಳೆ ದಾಖಲಾಗಿದ್ದರೆ, ಜುಲೈ ತಿಂಗಳಿನಲ್ಲಿ ಶೇ.೯ರಷ್ಟು ಕಡಿಮೆ ಮಳೆಯಾಗಿದೆ. ಕಳೆದ ೧೨೩ ವರ್ಷಗಳ ಇತಿಹಾಸದಲ್ಲೇ ಕೇರಳದಲ್ಲಿ ಈ ಬಾರಿ ಆಗಸ್ಟ್ ತಿಂಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಅರೇಬಿಯನ್ ಸಮುದ್ರದ ಕೊಂಕಣ-ಗೋವಾ ಕರಾವಳಿ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕೇರಳದ ಕರಾವಳಿಯಲ್ಲಿ ಪಶ್ಚಿಮ ಮಾರುತಗಳು ಪ್ರಬಲಗೊಂಡಿವೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಜನರಿಗೆ ಎಚ್ಚರಿಕೆಯಿಂದ ಇರಲು ಹವಾಮಾನ ಇಲಾಖೆ ಸೂಚಿಸಿದೆ. ರೂಢಿಯಂತೆ ೨೦೨೩ರ ೧೨೨ ದಿನಗಳ ಮಾನ್ಸೂನ್ ಅಂತ್ಯಗೊಳ್ಳಲು ಕೇವಲ ೧ ದಿನ ಬಾಕಿಯಿದೆ. ಈ ನಡುವೆ ಕೇರಳದಲ್ಲಿ ಮಳೆ ಮತ್ತೆ ಪ್ರಾರಂಭವಾಗಿದೆ.
ಇತ್ತ ಕರ್ನಾಟಕದ ಕರಾವಳಿಯಲ್ಲೂ ಮಳೆಯ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಕಳೆದ ೧೫ ದಿನಗಳಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಉಳಿದಂತೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಮಳೆ ಇಳಿಮುಖವಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲೂ ಮಳೆ ಕಡಿಮೆಯಾಗಿದೆ. ಕರ್ನಾಟಕ ಹೊರತುಪಡಿಸಿ, ಅಂಡಮಾನ್ ದ್ವೀಪಗಳು, ತಮಿಳುನಾಡಿನ ಕರಾವಳಿ, ಉತ್ತರ ಪ್ರದೇಶ, ಲಡಾಖ್, ಜಮ್ಮು-ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಭಾರೀ ಮಳೆಯಾಗಲಿದೆ.