ಚಿಕ್ಕೋಡಿ: ಮಾಜಿ ಸಿಎಂ ಕುಮಾರಸ್ವಾಮಿ ವಚನ ಭ್ರಷ್ಟರು ಎಂದು ಆರೋಪ ಮಾಡಿ ದ್ವೇಷ ಸಾಧಿಸಲು ಯಡಿಯೂರಪ್ಪ ಹೋಗಿದ್ದವರು. ಅದೇ ಕುಮಾರಸ್ವಾಮಿ ಅವರು ಬಿಎಸ್ವೈ ಅವರನ್ನು ಭ್ರಷ್ಟಾಚಾರ ಸುಳಿಯಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದರು. ಆದರೆ, ಇವತ್ತು ಅಧಿಕಾರಿಗೋಸ್ಕರ ಇಬ್ಬರು ನಾಯಕರು ಸ್ವಾಭಿಮಾನ ಬದಿಗೆ ಒತ್ತಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಕಿಡಿಕಾರಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಬ್ಬರು ನಾಲ್ಕು ಸಾರಿ ಮುಖ್ಯಮಂತ್ರಿ ಆದವರು ಮತ್ತು ಇನ್ನೊಬ್ಬರು ಎರಡು ಸಲ ಮುಖ್ಯಮಂತ್ರಿ ಆದವರು, ಹಿಂದೆ ಇಬ್ಬರು ಸೇರಿಕೊಂಡು ೨೦/೨೦ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು. ಅಧಿಕಾರ ಹಂಚಿಕೆಯಲ್ಲಿ ಕುಮಾಸ್ವಾಮಿ ಅವರು ಬಿಜೆಪಿಗೆ ಕೈಕೊಟ್ಟರು. ಅಂದು ಕುಮಾರಸ್ವಾಮಿ ಅವರು ವಚನ ಭ್ರಷ್ಟರು ಎಂಬುದನ್ನೂ ಯಡಿಯೂರಪ್ಪ ಆರೋಪಿಸಿ ದ್ವೇಷ ಸಾಧಿಸಿದ್ದರು.
ಅವತ್ತು ಅದೇ ಕುಮಾರಣ್ಣ ಅವರು ಭ್ರಷ್ಟಾಚಾರ ಸುಳಿಯಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಸಿಲುಕಿಸಿ ಜೈಲಿಗೆ ಕಳುಹಿಸಿರುವುದು ಇಡೀ ರಾಜ್ಯದ ಜನರಿಗೆ ಗೊತ್ತಿರುವ ವಿಚಾರ. ಆದರೆ, ಇವತ್ತು ಇಬ್ಬರು ನಾಯಕರು ಅಧಿಕಾರ ದಾಹಕ್ಕಾಗಿ ತಮ್ಮ ಸ್ವಾಭಿಮಾನ ಬದಿಗೆ ಇಟ್ಟಿದ್ದಾರೆ. ಅಧಿಕಾರ ಇದ್ದರೆ ಮಾತ್ರ ನಾವು ಬದುಕುತ್ತೇವೆ ಎನ್ನುವ ಈ ಇಬ್ಬರ ನಾಯಕರ ನಡೆಯನ್ನು ನೋಡಿ ಜನರು ನಗುತ್ತಿದ್ದಾರೆ.
ಇವರು ಅಧಿಕಾರಗೋಸ್ಕರ ಏನೇನೋ ಮಾಡಲಿಕ್ಕೆ ಹೊರಟಿದ್ದಾರೆ ಎಂದು ಗ್ರಾಮೀಣ ಪ್ರದೇಶದ ಜನರು ಕಟ್ಟೆಯ ಮೇಲೆ ಕುಳಿತು ಚರ್ಚಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರ ಮಾತುಗಳು ಅವರಿಗೆ ಹೋಗಿ ಮುಟ್ಟುವುದಿಲ್ಲ. ನಾನು ಗ್ರಾಮೀಣ ಭಾಗದಲ್ಲಿ ಇರುವುದರಿಂದ ಮಾಧ್ಯಮ ಮುಖಾಂತರ ಜನರ ಅಭಿಪ್ರಾಯ ತಿಳಿಸುತ್ತಿದ್ದೇನೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.