ಬಳ್ಳಾರಿ: ದೇವರು ಮನುಷ್ಯನಿಗೆ ನೀಡಿದ ಅದ್ಭುತ ಕೊಡುಗೆಗಳಲ್ಲಿ ಕಣ್ಣು ಸಹ ಒಂದಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಕಣ್ಣಿನ ಆರೈಕೆಗೆ ಒತ್ತು ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ತಿಳಿಸಿದ್ದಾರೆ. ವಿಶ್ವ ದೃಷ್ಟಿ ದಿನ ಅಂಗವಾಗಿ ಪ್ರಕಟಣೆ ಹೊರಡಿಸಿರುವ ಅವರು, ಜಾಗತಿಕವಾಗಿ ಕುರುಡುತನ ಮತ್ತು ದೃಷ್ಟಿ ಹೀನತೆಯ ಬಗ್ಗೆ ಜನ ಜಾಗೃತಿ ರೂಪಿಸಲು 2000ರ ಅಕ್ಟೋಬರ್ 12ರಿಂದ ಪ್ರತಿ ವರ್ಷ ವಿಶ್ವ ದೃಷ್ಟಿ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಸಾಮಾನ್ಯವಾಗಿ ಕುರುಡುತನದ ಸಮಸ್ಯೆಗಳನ್ನು ತಡೆಗಟ್ಟಬಹುದಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಸರಿಯಾದ ಚಿಕಿತ್ಸೆ ಪಡೆಯದ ಕಾರಣ, ಕ್ರಮೇಣ ದೃಷ್ಟಿ ಹೀನತೆಗೆ ಕಾರಣವಾಗುತ್ತವೆ. ಸಾರ್ವಜನಿಕರು ಈ ದಿಶೆಯಲ್ಲಿ ಪೌಷ್ಟಿಕಕಾಂಶವುಳ್ಳ ಆಹಾರವನ್ನು ಸೇವಿಸಬೇಕು, ಊಟದಲ್ಲಿ ಹಸಿರು ತರಕಾರಿಗಳು, ಹಳದಿ ಮತ್ತು ಕೆಂಪು ಹಣ್ಣುಗಳು ಹಾಗೂ ಸ್ಥಳೀಯವಾಗಿ ಸಾಮಾನ್ಯವಾಗಿ ದಿನನಿತ್ಯ ಸಿಗುವ ತರಕಾರಿ ಮತ್ತು ಕಾಯಿಪಲ್ಲೆಗಳನ್ನು ದೈನಂದಿನ ಆಹಾರದಲ್ಲಿ ಸೇವಿಸುವುದಕ್ಕೆ ಮಹತ್ವ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಕಣ್ಣಿನ ಸೋಂಕು ವಿಟಮಿನ್ ಎ ಅನ್ನಾಂಗದ ಕೊರತೆ, ಅಪೌಷ್ಠಿಕತೆ, ಕಣ್ಣಿನ ಅಕ್ಷಿಪಟಿಲದ ಗಾಯ, ಅನುವಂಶಿಕ ನ್ಯೂನತೆ ಮುಂತಾದವುಗಳು ಕಣ್ಣಿನ ದೃಷ್ಟಿ ಹಾನಿಯಾಗಲು ಕಾರಣವಿರುತ್ತದೆ. ಕಣ್ಣಿಗೆ ಸಂಬಂಧಿಸಿದಂತೆ ಯಾವುದೇ ಸೋಂಕು ಕಂಡುಬಂದರೆ ನಿಗದಿತವಲ್ಲದ ಔಷಧಿಗಳನ್ನು ಹಾಕಬಾರದು, ಬದಲಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು ಎಂದು ಹೇಳಿದರು.
ಹಬ್ಬಗಳ ಸಮಯದಲ್ಲಿ ಹಾಗೂ ಮನೆಯ ವಿಶೇಷ ಕಾರ್ಯಕ್ರಮಗಳಲ್ಲಿ ಪಟಾಕಿಗಳನ್ನು ಬಳಸದಂತೆ, ಅದರಲ್ಲೂ ಪ್ರಬಲವಾದ ಪಟಾಕಿಗಳನ್ನು ಮಕ್ಕಳಿಗೆ ಕೊಡದಂತೆ ಜಾಗ್ರತೆ ವಹಿಸಬೇಕು. ಪಟಾಕಿಗಳನ್ನು ಹಾರಿಸುವಾಗ ಪ್ಲಾಸ್ಟಿಕ್ ಡಬ್ಬಿಗಳು, ತಗಡಿನ ಟಿನ್ಗಳು ಮುಂತಾದವುಗಳನ್ನು ಪಟಾಕಿಗಳ ಮೇಲೆ ಮುಚ್ಚಿ ಹಾರಿಸದಿರುವಂತೆ ಪಾಲಕರು ನಿಗಾವಹಿಸಬೇಕು. ಪಟಾಕಿ ಸಿಡಿತದ ಗಾಯಗಳಿಂದ ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯಬೇಕು ಎಂದು ಡಿಹೆಚ್ಒ ಡಾ.ವೈ ರಮೇಶ್ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.