ಪಾಟ್ನಾ(ಬಿಹಾರ): ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲ್ವೆ ನಿಲ್ದಾಣದ ಬಳಿ ನಡೆದ ರೈಲು ದುರಂತದಲ್ಲಿ ನಾಲ್ವರು ಸಾವನ್ನಪ್ಪಿ, ೧೦೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ದೆಹಲಿ – ಕಾಮಾಖ್ಯ ಎಕ್ಸ್ಪ್ರೆಸ್ನ ಆರು ಬೋಗಿಗಳು ಹಳಿತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಮತ್ತು ರೈಲ್ವೇ ದುರಸ್ಥಿ ಕಾರ್ಯ ಮುಂದುವರೆದಿದೆ. ರೈಲು ದುರಂತ ಪ್ರಕರಣವನ್ನು ವಿಶೇಷ ತಂಡ ತನಿಖೆ ನಡೆಸುತ್ತದೆ ಎಂದು ಪೂರ್ವ ಸೆಂಟ್ರಲ್ ರೈಲ್ವೆ ಜಿಎಂ ತರುಣ್ ಪ್ರಕಾಶ್ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಘಾತ ನಡೆದ ಸ್ಥಳದಲ್ಲಿ ರೈಲ್ವೆ ಹಳಿಗಳು ಬೇರ್ಪಟ್ಟಿರುವುದು ಕಂಡುಬಂದಿದೆ. ಘಟನೆ ಹಿಂದೆ ದುಷ್ಕರ್ಮಿಗಳ ಕೈವಾಡ ಇರುವ ಸಾಧ್ಯತೆ ಇದೆ. ಈ ಸಂಬಂಧ ಪ್ರಕರಣವನ್ನು ವಿಶೇಷ ತಂಡದಿಂದ ತನಿಖೆ ನಡೆಸಲಾಗುವುದು. ರೈಲ್ವೇ ಇಲಾಖೆ ತನ್ನದೇ ಆದ ತನಿಖಾ ವಿಧಾನಗಳನ್ನು ಹೊಂದಿದೆ ಎಂದು ಹೇಳಿದರು.
ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಸ್ಥಳಕ್ಕೆ ಎರಡು ಕ್ರೇನ್ಗಳು ಆಗಮಿಸಿದ್ದು, ರೈಲ್ವೆ ಹಳಿಗಳನ್ನು ಮತ್ತೆ ಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ. ಅಪಘಾತದ ಕುರಿತು ತನಿಖೆ ನಡೆಸಲು ಉನ್ನತ ತನಿಖಾ ತಂಡವನ್ನು ರಚಿಸಿದ್ದು, ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಹಳಿ ತುಂಡಾಗಿತ್ತೋ ಅಥವಾ ಏನಾಗಿತ್ತು ಎಂಬ ಬಗ್ಗೆ ತನಿಖೆ ಬಳಿಕ ತಿಳಿದು ಬರಲಿದೆ ಎಂದು ತಿಳಿಸಿದರು.
ಬಕ್ಸರ್ ರೈಲು ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ೧೦೦ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ. ಅಪಘಾತದ ಸಂದರ್ಭ ಕೆಲವರು ಮಲಗಿಕೊಂಡಿದ್ದರು, ಇನ್ನು ಕೆಲವರು ಮಲಗಲು ಸಿದ್ಧತೆ ನಡೆಸುತ್ತಿದ್ದರು.ರಘುನಾಥಪುರ ರೈಲ್ವೆ ನಿಲ್ದಾಣ ಬಳಿ ಅಪಘಾತ ಸಂಭವಿಸಿದೆ. ಸುತ್ತಲೂ ಕತ್ತಲೆ ಮತ್ತು ಧೂಳಿನಿಂದ ತುಂಬಿಕೊಂಡಿದ್ದರಿಂ ಪ್ರಯಾಣಿಕರಿಗೆ ಏನಾಗುತ್ತಿದೆ ಎಂಬುದು ಅರಿಯಲು ಸಾಧ್ಯವಾಗಿಲ್ಲ. ಅಪಘಾತದಲ್ಲಿ ಮೂರು ಬೋಗಿಗಳು ಪಲ್ಟಿಯಾಗಿದ್ದವು. ಬಳಿಕ ಸ್ಥಳಕ್ಕೆ ಆಗಮಿಸಿದ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.