ಯಳಂದೂರು: ಕುಡಿತದಿಂದ ಇದಕ್ಕೆ ದಾಸನಾಗುವ ವ್ಯಕ್ತಿ, ಈತನ ಕುಟುಂಬ, ಬೀದಿ, ಊರು ಸೇರಿದಂತೆ ಇಡೀ ಸಮಾಜದ ಸ್ವಾಸ್ಥ್ಯವೇ ಕೆಡುವುದರಿಂದ ಇದರಿಂದ ದೂರವಿರುವ ಸಂಕಲ್ಪವನ್ನು ಇಂದಿನಿಂದಲೇ ಎಲ್ಲರೂ ಮಾಡಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಕರೆ ನೀಡಿದರು.
ಅವರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗಾಂಧಿ ಸ್ಮೃತಿ ಜನಜಾಗೃತಿ ಜಾಥಾ ಮತ್ತು ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮವದಲ್ಲಿ ಭಾಗವಹಿಸಿ ಮಾತನಾಡಿದರು. ದುಶ್ಚಟಗಳಿಂದ ಕುಟುಂಬದ ಸಹಬಾಳ್ವೆ ದೂರವಾಗುತ್ತದೆ. ಇದರಿಂದ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಹಾಳಾಗುತ್ತದೆ. ಇದನ್ನು ಈಗಿನಿಂದಲೇ ಬಿಡುವ ಕೆಲಸವನ್ನು ಇದಕ್ಕೆ ದಾಸರಾಗಿರುವ ಎಲ್ಲರೂ ಮಾಡಬೇಕು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ ಅನೇಕ ಮಧ್ಯವರ್ಜನ ಶಿಬಿರವನ್ನು ಆಯೋಜಿಸಿ ಸಾವಿರಾರು ಮಂದಿ ಇದರ ದಾಸ್ಯದಿಂದ ಮುಕ್ತ ಮಾಡಿರುವ ಕೆಲಸ ಶ್ಲಾಘನೀಯ ಎಂದು ಬಣ್ಣಿಸಿದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಬಿ. ಜಯರಾಮ ನೆಲ್ಲಿತಾಯ ಮಾತನಾಡಿ, ಕಳೆದ ೩೮ ವರ್ಷಗಳಿಂದ ಬೆಳ್ತಂಗಡಿಯಲ್ಲಿ ಆರಂಭಗೊಂಡ ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳು ಅನೇಕ ಸಮಾಜಪರ ಕೆಲಸಗಳನ್ನು ಮಾಡಿದೆ. ಇಡೀ ರಾಜ್ಯವನ್ನು ಮಧ್ಯಪಾನ ಮುಕ್ತ ಮಾಡುವಂತೆ ಹೋರಾಟ ಮಾಡುತ್ತಿರುವ ಏಕೈಕ ಸಂಸ್ಥೆ ಇದಾಗಿದೆ. ಗಾಂಧಿಜಿ ಕಂಡ ಮಧ್ಯಪಾನಮುಕ್ತ ರಾಷ್ಟ್ರದ ಕನಸನ್ನು ಎಲ್ಲರೂ ಮಾಡಬೇಕು. ಮಧ್ಯಪಾನ ಬೆಂಕಿಯಾಗಿದ್ದು ಮನುಷ್ಯ ಪೆಟ್ರೋಲ್ ಆಗಿರುತ್ತಾನೆ. ಇದರ ಬಳಿ ಹೋದರೆ ಇಡೀ ಜೀವ, ಜೀವನ ಸುಟ್ಟು ಹೋಗುವುದರಿಂದ ಇದರಿಂದ ಆದಷ್ಟು ದೂರವಿರಬೇಕು. ಇದು ಬಡವರನ್ನೇ ಹೆಚ್ಚಾಗಿ ಕೊಲ್ಲುತ್ತಿದ್ದು ಇವರ ಇದರ ಬಳಿಗೆ ಸುಳಿಯಬಾರದು. ನಮ್ಮ ಸಂಸ್ಥೆಯ ವತಿಯಿಂದ ಈ ವರೆಗೆ ರಾಜ್ಯಾದ್ಯಂತ ೧೮೦೦ ಮಧ್ಯವರ್ಜನ ಶಿಬಿರಗಳನ್ನು ಮಾಡಲಾಗಿದ್ದು ೮೨ ಸಾವಿರ ಮಂದಿಯನ್ನು ಇದರ ಚಟದಿಂದ ಮುಕ್ತಗೊಳಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡಿದೆ ಎಂದರು.
ಇದಕ್ಕೂ ಮುಂಚೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವೇಷಭೂಷಣಗಳನ್ನು ತೊಟ್ಟ ಮಕ್ಕಳೊಂದಿಗೆ ನೂರಾರು ಮಂದಿ ಗಾಂಧಿ ಸ್ಮೃತಿ ಜನಜಾಗೃತಿ ಜಾಥ ನಡೆಸಿ ಮಧ್ಯಪಾನದ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಿದರು.
ಪಪಂ ಮುಖ್ಯಾಧಿಕಾರಿ ಮಹೇಶ್ಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಸ್. ರವಿಶಂಕರ್, ಜಿಲ್ಲಾ ಯೋಜನಾ ನಿರ್ದೇಶಕಿ ಲತಾ ಬಂಗೇರಾ ಮಾತನಾಡಿದರು. ತಾಲೂಕು ಯೋಜನಾ ನಿರ್ದೇಶಕ ಪ್ರವೀಣ್ ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಕೆ. ಮಲ್ಲಯ್ಯ, ಆರ್. ಮಂಜು, ಬಿ. ರವಿ ಮಾಜಿ ಸದಸ್ಯ ಜೆ. ಶ್ರೀನಿವಾಸ್, ಭೀಮಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂಬಳೆ ವೀರಭದ್ರನಾಯಕ ಚೇತನ್, ಮಹದೇವಸ್ವಾಮಿ, ಅರುಣ್ಕುಮಾರ್, ಬಸವರಾಜು ಮಹದೇವಪ್ಪ ಸೇರಿದಂತೆ ಅನೇಕರು ಇದ್ದರು.