ಮೈಸೂರು: ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಅಥರ್ವ ನಿಲಯದ ಬನಶಂಕರಿ ಬೊಂಬೆ ಮನೆಯಲ್ಲಿ ಶ್ರೀಮತಿ ಪೂಜಾ ಪುನೀತ್ ರವರು ದಸರಾ ಬೊಂಬೆ ಪ್ರದರ್ಶನ ಏರ್ಪಡಿಸಿದ್ದಾರೆ. ಧಾರ್ಮಿಕ, ಸಾಮಾಜಿಕ, ಪೌರಾಣಿಕ, ಶೈಕ್ಷಣಿಕ ಬೊಂಬೆಗಳನ್ನು ಒಳಗೊಂಡಂತೆ 350 ಕ್ಕೂ ಹೆಚ್ಚು ಬೊಂಬೆಗಳನ್ನು ಪ್ರದರ್ಶನ ಮಾಡಲಾಗಿದೆ. ಅಯೋಧ್ಯೆಯ ಶ್ರೀರಾಮಮಂದಿರ, ವಿವಾಹ ವೈಭವ, ಗಜಪಡೆ, ಶೃಂಗೇರಿಯ ಶಾರದಾ ಪೀಠ, ಕಾಶ್ಮೀರದಲ್ಲಿ ಶಾರದ ಪೀಠದ ಸ್ಥಾಪನೆ, ಸ್ವಾತಂತ್ರ್ಯದ ಅಮೃತ ಮಹೋತ್ಸವ, ಸಮುದ್ರ ಮಂಥನ, ಕಾರ್ಟೂನ್ ಗೊಂಬೆಗಳು, ತಲಕಾಡು ಪಂಚಲಿಂಗ ದರ್ಶನ, ಬೇಡರ ಕಣ್ಣಪ್ಪ, ಘಟೋದ್ಗಜ, ಆತ್ಮ ನಿರ್ಭರ ಭಾರತ, ಸ್ವದೇಶಿ ಜಾಗೃತಿ, ಅರಣ್ಯ ರಕ್ಷಣೆ ಸೇರಿದಂತೆ ಹಲವಾರು ಸಾಮಾಜಿಕ ಸಂದೇಶ ಸಾರುವ ಬೊಂಬೆಗಳ ಪ್ರದರ್ಶನ ಮಾಡಿದ್ದಾರೆ.
ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾದ ಈ ಗೊಂಬೆ ಪ್ರದರ್ಶನ ಈಗಾಗಲೇ ಕಳೆದ ವರ್ಷಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದು ಇಲ್ಲಿ ಸ್ಮರಿಸಬಹುದು. ಕೆ. ಆರ್. ಗಣೇಶ್, ಸರಸ್ವತಿ, ಪೂಜಾ, ಪುನೀತ್ ಹಾಗೂ ಚಿ. ಪೃಥು ಪಿ ಅದ್ವೈತ್ ಹಲವಾರು ದಿನಗಳ ಪರಿಶ್ರಮದಿಂದ ದಸರಾ ಬೊಂಬೆ ಪ್ರದರ್ಶನ ಯಶಸ್ವಿಯಾಗಿದೆ. ಇದರೊಂದಿಗೆ ಸಂಜೆ ಸಮಯ ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಸೌಂದರ್ಯ ಲಹರಿ, ಸಂಗೀತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಬೊಂಬೆ ಪ್ರದರ್ಶನದ ಭಾಗವಾಗಿದೆ. ಕಳೆದ ವರ್ಷ ಸುಮಾರು 250 ಕ್ಕೂ ಹೆಚ್ಚು ಜನ ಬೇಟಿ ನೀಡಿದ್ದರು ಈ ಬಾರಿ ಅದಕ್ಕಿಂತ ಹೆಚ್ಚು ಜನರು ಬನಶಂಕರಿ ಬೊಂಬೆ ಮನೆಯ ದಸರಾ ಬೊಂಬೆ ವೀಕ್ಷಣೆಗೆ ಬರುವ ನಿರೀಕ್ಷೆಯಿದೆ ಎಂದು ಬನಶಂಕರಿ ಬೊಂಬೆ ಮನೆಯ ಶ್ರೀಮತಿ ಪೂಜಾ ಪುನೀತ್ ತಿಳಿಸಿದರು.