ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಿರುವ ಫಲಪುಷ್ಟ ಪ್ರದರ್ಶನ ಹಾಗೂ ಸೌಟ್ಸ್ ಮತ್ತು ಗೈಡ್ ಮೈದಾನದಲ್ಲಿನ ಆಹಾರ ಮೇಳಕ್ಕೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಗುರುವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದರು.
ಮೊದಲಿಗೆ ದಸರಾದ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ಫಲಪುಷ್ಟ ಪ್ರದರ್ಶನಕ್ಕೆ ಭೇಟಿ ನೀಡಿದ ಸಚಿವರು, ಗಾಜಿನ ಮನೆಯಲ್ಲಿ ಸಾವಿರಾರು ಹೂಗಳಿಂದ ಅರಳಿರುವ ಇಸ್ರೋ ವಿಜ್ಞಾನಿಗಳ ಸಾಧನೆಯಾದ ಚಂದ್ರಯಾನ-3 ಕಲಾಕೃತಿಯನ್ನು ಕಂಡು ಮನಸೋತರು.

ಬಳಿಕ ಜನಾಕರ್ಷಣೆಯಾಗಿರುವ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಾದ ಕೆಎಸ್ಆರ್ಟಿಸಿಯ ಬಸ್ ಮಾದರಿಯ ಶಕ್ತಿ ಯೋಜನೆ, ವಿದ್ಯುತ್ ಬಲ್ಬ್ ಮತ್ತು ಕಂಬದ ಪ್ರತಿಕೃತಿಯಲ್ಲಿನ ಗೃಹಜ್ಯೋತಿ ಮತ್ತು ಎರಡು ಸಾವಿರ ರೂ. ಗೃಹಲಕ್ಷ್ಮಿ ಯೋಜನೆಗಳ ಪ್ರತಿಕೃತಿಗಳನ್ನು ಕಣ್ತುಂಬಿಕೊಂಡು ಮೆಚ್ಚುಗೆ ಸೂಚಿಸಿದರು. ವಾಕಿಂಗ್ ಪಾಥ್ನಲ್ಲಿ ಹೂ ಕುಂಡಗಳಲ್ಲಿ ಜೋಡಿಸಿರುವ ವಿವಿಧ ಬಗೆಯ ಹೂಗಳು ಸೂಸುವ ಚಲುವನ್ನು ಆಸ್ವಾದಿಸಿದರು.

ಸೆಲ್ಫಿ, ಪೋಟೋಗಾಗಿ ಮುಗಿಬಿದ್ದ ಜನರು
ಫಲಪುಷ್ಪ ಪ್ರದರ್ಶನದಲ್ಲಿ ಹೂವಿಗಳ ಸೌಂದರ್ಯವನ್ನು ಕಣ್ತುಂಬಿಕೊಂಡು ವರ್ಣರಂಜಿತ ಕುಸುಮಗಳ ಪರಿಮಳಕ್ಕೆ ಪರವಸರಾಗಲು ಕುಪ್ಪಣ್ಣ ಉದ್ಯಾನಕ್ಕೆ ಲಗ್ಗೆ ಇಟ್ಟಿದ್ದ ಜನರು ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರೊಡನೆ ಕುಟುಂಬಸಮೇತ ಸೆಲ್ಫಿ ಮತ್ತು ಪೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಸಚಿವರು ನಗುಮೊಗದಿಂದಲೇ ಎಲ್ಲರಿಗೂ ಸಹಕರಿಸಿ ಪೋಸು ನೀಡಿದರು.
ಬಳಿಕ ಆಹಾರ ಮೇಳಕ್ಕೆ ಭೇಟಿ ನೀಡಿ, ಎಲ್ಲಾ ಮಳಿಗೆಗಳನ್ನು ವೀಕ್ಷಿಸಿದ ಸಚಿವರು ವಿವಿಧ ತಿನಿಸುಗಳನ್ನು ಸವಿದರು. ಈ ವೇಳೆ ಆಹಾರ ಮೇಳದ ಆವರಣವನ್ನು ಸ್ವಚ್ಛತೆಯನ್ನು ಕಾಪಾಡಬೇಕು. ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಆವರಣಕ್ಕೆ ಆಗಮಿಸುವ ಆಹಾರ ಪ್ರಿಯರಿಗೆ ಯಾವುದೇ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.