ಚಿತ್ರದುರ್ಗ : ಮಲೇರಿಯಾ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು. ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಕಚೇರಿ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಎರಡು ದಿನಗಳ ಮಲೇರಿಯಾ ಹಾಗೂ ಇತರೆ ಕೀಟಜನ್ಯ ರೋಗಗಳ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೀರಿನ ಶೇಖರಣ ತಾಣಗಳನ್ನು ಶುಚಿಯಾಗಿಟ್ಟುಕೊಂಡು ಲಾರ್ವ ಆಗದಂತೆ ಹತೋಟಿ ಮತ್ತು ನಿರ್ಮೂಲನೆ ಮಾಡಲು ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಗುಣಮಟ್ಟದ ಜ್ವರ ಸಮೀಕ್ಷೆ ಹಾಗೂ ರಕ್ತ ಪರೀಕ್ಷೆ ಮಾಡುವುದು ಹಾಗೂ ಮಲೇರಿಯಾ ಎಂದು ದೃಢಪಟ್ಟಲ್ಲಿ ಪೂರ್ಣ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು. ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳಾದ ಸೊಳ್ಳೆ ಪರದೆ ಬಳಸುವುದು, ಬೇವಿನಸೊಪ್ಪಿನ ಹೊಗೆ ಹಾಕುವುದು ಇನ್ನು ಮುಂತಾದ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಶಿಕ್ಷಣ ನೀಡಿ ರೋಗವನ್ನು ಹತೋಟಿಗೆ ತರುವತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಎನ್.ಕಾಶಿ. ಜಿಲ್ಲಾ ಕೀಟಶಾಸ್ತ್ರಜ್ಞರಾದ ನಂದಿನಿ ಕಡಿ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯ ಅರೋಗ್ಯ ಮೇಲ್ವಿಚಾರಕರಾದ ಟಿ. ಮಲ್ಲಿಕಾರ್ಜುನ್, ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಬಿ. ಆರ್ ನಾಗರಾಜ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹೆಚ್.ಎ.ನಾಗರಾಜ್, ಶ್ರೀನಿವಾಸ್, ಲೋಕೇಶ್, ಪಾಂಡು ಸೇರಿದಂತೆ ಕಚೇರಿಯ ಸಿಬ್ಬಂದಿ ಇದ್ದರು.