ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆಧಾರ ರಹಿತವಾಗಿ ಆರೋಪ ಮಾಡುವುದಲ್ಲದೇ ಹಿಗ್ಗಾಮಗ್ಗ ಬೈಯುತ್ತಿರುವುದು ನಾಚಿಗೆಕೇಡು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಾ ಪ್ರಹಾರ ನಡೆಸಿದರು. ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಳಿಯಲ್ಲಿ ಗುಂಡು ಹಾರಿಸುವುದರಲ್ಲಿ ಕುಮಾರಸ್ವಾಮಿ ನಂ. ೧, ಜನರ ದಿಕ್ಕು ತಪ್ಪಿಸಲು ವ್ಯವಸ್ಥಿತವಾಗಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಕುಮಾರಸ್ವಾಮಿ ಮುಂದೆ ಬಿಟ್ಟು ಹೇಡಿಗಳಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿನಾಕಾರಣ ಆರೋಪ ಮಾಡುವ ಬಿಜೆಪಿ ಮತ್ತು ಕುಮಾರಸ್ವಾಮಿ ಅವರಿಗೆ ಹುಚ್ಚು ಹಿಡಿದಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಮೂಲೆ ಮೂಲೆಗೆ ತಲುಪಿರುವುದನ್ನು ಸಹಿಸಲಾಗುತ್ತಿಲ್ಲ. ಕುಮಾರಸ್ವಾಮಿ ಅವರಿಗೆ ಇನ್ನೊಬ್ಬ ಒಕ್ಕಲಿಗ ಮುಖಂಡ ಬೆಳೆಯೋದನ್ನು ಸಹಿಸಲಾಗದ ಮನಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಯಾವ ಪರಿಸ್ಥಿತಿಯಲ್ಲಿತ್ತು ಎಂಬುದನ್ನು ತಿಳಿಸಲು ಶ್ವೇತಪತ್ರ ಹೊರಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಗುತ್ತಿಗೆದಾರರ ೮೦ ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದ ನೀಚ ಸರ್ಕಾರ ಎಂದು ಆರೋಪಿಸಿದರು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸುತ್ತೇವೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಸ್ವಾಗತಿಸುವುದಾಗಿ ಹೇಳಿದ ಲಕ್ಷ್ಮಣ್, ಇದರಿಂದ ಕುಮಾರಸ್ವಾಮಿ ಅವರಿಗೆ ಆಗುವ ಸಮಸ್ಯೆ ಏನು ಎಂದು ಪ್ರಶ್ನಿಸಿದರು.
ರಾಮನಗರ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಬ್ರ್ಯಾಂಡ್ ಬೆಂಗಳೂರು ವ್ಯಾಪ್ತಿಗೆ ಸೇರಿದರೆ ಉದ್ಯೋಗವಕಾಶ, ಕೈಗಾರಿಕೆ ಬೆಳವಣಿಗೆ, ಪ್ರವಾಸೋದ್ಯಮ, ಜನರ ಜೀನವ ಶೈಲಿ, ತಲಾದಾಯ, ಸಣ್ಣ ಉದ್ಯಮಗಳ ಬೆಳವಣಿಗೆಯಾಗುತ್ತದೆ. ಇದು ಅಪರಾಧವೇ? ಈ ವಿಚಾರವಾಗಿ ಕುಮಾರಸ್ವಾಮಿ ಮೈ ಮೇಲೆ ಚೇಳು ಬಿಟ್ಟುಕೊಂಡವರಂತೆ ಆಡಬೇಕೇ? ಎಂದು ಕುಟುಕಿದರು.
ಬಿಡದಿಯ ಕೇತಗಾನಹಳ್ಳಿ, ದೇವಗಿರಿ ವ್ಯಾಪ್ತಿಯಲ್ಲಿರುವ ಕುಮಾರಸ್ವಾಮಿ ಜಮೀನು ಬೆಂಗಳೂರು ನಗರ ವ್ಯಾಪ್ತಿಗೆ ಸೇರಿವೆ. ನೈಸ್ ರಸ್ತೆ ಅಕ್ಕಪಕ್ಕ ಎಚ್.ಡಿ. ದೇವೇಗೌಡರ ೪೩ ಜನರು ಬೇನಾಮಿ ಹೆಸರಿನಲ್ಲಿ ಆಸ್ತಿಗಳಿವೆ ಎಂದು ನ್ಯಾಯಾಲಯಕ್ಕೆ ಅಶೋಕ್ ಖೇಣಿ ವಂಶವೃಕ್ಷ ಸಲ್ಲಿಸಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಮೊದಲು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಈಗ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಕರೆದಿರುವ ಕುಮಾರಸ್ವಾಮಿ ಅವರು ಜೂನ್ ೨೭, ೨೦೧೧ರಲ್ಲಿ ಧರ್ಮಸ್ಥಳಕ್ಕೆ ಕರೆದಿದ್ದು ಏನಾಯಿತು? ಈಗ ಏನಕ್ಕೆ ಧರ್ಮಸ್ಥಳಕ್ಕೆ ಕರೆಯುತ್ತಿದ್ದೀರಿ? ಅಮಿತ್ ಶಾ ಅವರಿಂದ ಸುಫಾರಿ ಪಡೆದು ಆರೋಪ ಮಾಡುತ್ತಿರುವಿರಿ, ಪೆನ್ ಡ್ರೈನ್ ಎಲ್ಲಿ ಹೋಯಿತು? ನಿಮ್ಮ ಅವಧಿಯ ಭ್ರಷ್ಟಾಚಾರ ಪ್ರಪಂಚಕ್ಕೆ ಫೇಮಸ್ಸು ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರು ಕಾಂಗ್ರೆಸ್ ಟೀಕಿಸುವ ಮೊದಲು ಸಿ.ಎಂ. ಇಬ್ರಾಹಿಂ ಅವರಿಗೆ ಉತ್ತರ ಕೊಡಬೇಕು. ಮುಂದಿನ ೧೦ ವರ್ಷ ಕಾಂಗ್ರೆಸ್ ಆಡಳಿತವಿರುತ್ತದೆ. ಅಲ್ಲಿವರೆಗೆ ಸುಮನಿರಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಎಂ. ಶಿವಣ್ಣ, ಮಾಧ್ಯಮ ಸಂಚಾಲಕ ಕೆ. ಮಹೇಶ್, ಸೇವಾದಳದ ಗಿರೀಶ್ ಮುಂತಾದವರಿದ್ದರು.
ಹುಲಿ ಉಗುರು ಪ್ರಕರಣದಲ್ಲಿ ಕಾನೂನು ಎಲ್ಲರಿಗೂ ಒಂದೇ. ವರ್ತೂರ್ ಸಂತೋಷ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್, ದರ್ಶನ್ ಯಾರೇ ಇದ್ದರೂ ಪ್ರಕರಣ ದಾಖಲಿಸಬೇಕು. ತನಿಖೆಗೆ ಮುನ್ನವೇ ಕುಮಾರಸ್ವಾಮಿ ತಮ್ಮ ಪುತ್ರ ಧರಿಸಿದ್ದು ರಬ್ಬರ್ ಉಗುರು ಎಂದು ಸ್ಪಷ್ಟನೆ ನೀಡಿ ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದಾರೆ.
-ಎಂ.ಲಕ್ಷ್ಮಣ್,
ಕೆಪಿಸಿಸಿ ವಕ್ತಾರ.