ಮದ್ದೂರು: ರೈತರು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ಸಿಗುವ ಸವಲತ್ತು ಹಾಗೂ ಸಲಹೆಯನ್ನು ಪಡೆದು ಪ್ರಯೋಜನ ಹೊಂದಬೇಕು ಎಂದು ಶಾಸಕ ಉದಯ್ ತಿಳಿಸಿದರು.
ತಾಲ್ಲೂಕಿನ ಕೆ. ಕೋಡಿಹಳ್ಳಿಯಲ್ಲಿ ಗುರುವಾರ ತೋಟಗಾರಿಕಾ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಳಾಗಿದ್ದ ತೆಂಗಿನಲ್ಲಿ ಕಪ್ಪು ತಲೆಹುಳುವಿನ ಬಾಧೆ ನಿಯಂತ್ರಣ ಕ್ರಮಗಳ ಕುರಿತು ನಡೆದ ಕ್ಷೇತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕಿ ರೂಪಶ್ರೀ ಮಾತನಾಡಿ, ತೆಂಗಿನಲ್ಲಿ ಹಲವು ವರ್ಷಗಳಿಂದ ಕಪ್ಪು ತಲೆ ಹುಳು ಬಾಧೆ ಕಂಡು ಬರುತ್ತಿದ್ದು, ಅದರಿಂದಾಗಿ ಫಸಲು ಕಡಿಮೆಯಾಗುವುದರ ಜೊತೆಗೆ ತೆಂಗಿನ ಮರಗಳಿಗೂ ಹಾನಿಯಾಗುತ್ತದೆ ಎಂದರು.
ಆದ್ದರಿಂದ ಅದರ ನಿಯಂತ್ರಣಕ್ಕಾಗಿ ರೈತರು ಕೆಲವರು ಗಮನಹರಿಸುವುದರ ಬದಲಾಗಿ ಸಾಮೂಹಿಕವಾಗಿ ಎಲ್ಲರೂ ಸೂಕ್ತ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಅದನ್ನು ತಡೆಗಟ್ಟಬಹುದು ಎಂದರು.
ಕಪ್ಪು ತಲೆ ಹುಳುಗಳ ಬಾಧೆ ಜಿಲ್ಲೆಯಲ್ಲಿ ಹೆಚ್ಚು ಮದ್ದೂರು ತಾಲ್ಲೂಕಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ, ಅದಕ್ಕಾಗಿ ಅವುಗಳ ನಿಯಂತ್ರಣಕ್ಕಾಗಿ ತೆಂಗಿನ ಮರಗಳಿಗೆ ಪರೋಪಜೀವಿಗಳನ್ನು ಬಿಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತೋಟಗಾರಿಕಾ ಇಲಾಖೆಯ ವಿಜ್ಞಾನಿ ಮುತ್ತುರಾಜ್ ಕಪ್ಪು ತಲೆ ಹುಳುವುವಿನ ತಡೆಗಟ್ಟುವಿಗೆ ಹಾಗೂ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕಾ ಸಹಾಯಕ ಅಧಿಕಾರಿ ರೇಖಾ, ಕದಲೂರು ಗ್ರಾ. ಪಂ ಅಧ್ಯಕ್ಷ ತಿಮ್ಮೆಗೌಡ, ಮುಖಂಡರಾದ ಚೆಲುವರಾಜು ಸೇರಿದಂತೆ ಇತರರು ಇದ್ದರು.