ಬೆಂಗಳೂರು: ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ತೊಂದರೆ ಅನುಭವಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳಿಂದ ಜಗ್ಗೇಶ್ಗೆ ನೋಟಿಸ್ ಕೂಡ ನೀಡಲಾಗಿತ್ತು. ಇದಕ್ಕೆ ತಡೆನೀಡಬೇಕು ಎಂದು ಜಗ್ಗೇಶ್ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಜಗ್ಗೇಶ್ ಪರವಾಗಿ ಕೋರ್ಟ್ ಆದೇಶ ನೀಡಿದೆ. ಜಗ್ಗೇಶ್ ವಿರುದ್ಧ ಅರಣ್ಯಾಧಿಕಾರಿಗಳ ನೋಟಿಸ್ಗೆ ಹೈಕೋರ್ಟ್ ತಡೆ ನೀಡಿದೆ.
ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧದ ಕ್ರಮ ಕಾನೂನುಬಾಹಿರವೆಂದು ಜಗ್ಗೇಶ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದಿಸಿದರು. ವಾದವನ್ನು ಕೇಳಿದ ಬಳಿಕ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ. ಜಗ್ಗೇಶ್ಗೆ ಅವರ ತಾಯಿ ಹುಲಿಯ ಉಗುರಿನ ಪೆಂಡೆಂಟ್ ನೀಡಿದ್ದರು. ಇದನ್ನು ಜಗ್ಗೇಶ್ ಧರಿಸುತ್ತಿದ್ದರು. ಈ ಬಗ್ಗೆ ಸಂದರ್ಶನ ಒಂದರಲ್ಲಿ ಅವರು ಹೇಳಿದ್ದರು. ಜಗ್ಗೇಶ್ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಜಗ್ಗೇಶ್ ಮನೆಗೆ ತೆರಳಿದ್ದರು. ಜೊತೆಗೆ ಮನೆಯನ್ನು ಶೋಧ ಮಾಡಿದ್ದರು. ವಿಚಾರಣೆಗೆ ಹಾಜರಾಗಲು ಜಗ್ಗೇಶ್ಗೆ ನೋಟಿಸ್ ಕೂಡ ನೀಡಲಾಯಿತು. ಈ ವೇಳೆ ಲಾಕೆಟ್ನ ಅರಣ್ಯಾಧಿಕಾರಿಗಳಿಗೆ ನೀಡಿದ್ದಾಗಿ ಜಗ್ಗೇಶ್ ಅವರು ಹೇಳಿದ್ದರು. ಆ ಬಳಿಕ ಅರಣ್ಯ ಇಲಾಖೆ ಕ್ರಮವನ್ನು ಅವರು ಖಂಡಿಸಿದ್ದರು.
ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ರದ್ದು ಮಾಡಬೇಕು. ನಾವು ಇದಕ್ಕೆ ಉತ್ತರಿಸುವ ಮೊದಲೇ ೧೪ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಸಂದರ್ಶನದಲ್ಲಿ ಹೇಳಿದ ಮಾತನ್ನು ಆಧರಿಸಿ ತೇಜೋವಧೆ ಮಾಡಲಾಗಿದೆ. ಅರಣ್ಯಾಧಿಕಾರಿಗಳ ಕ್ರಮವನ್ನು ಕಾನೂನುಬಾಹಿರವೆಂದು ಘೋಷಿಸಬೇಕು ಎಂಬುದಾಗಿ ಜಗ್ಗೇಶ್ ವಕೀಲರು ಅರ್ಜಿಯಲ್ಲಿ ಕೋರಿದ್ದರು.